ಹಾವೇರಿ: ಗೋವಾ, ಕೇರಳ, ಮಂಗಳೂರು ಸೇರಿದಂತೆ ಕೆಲಸ ಅರಸಿಕೊಂಡು ಗುಳೆ ಹೋಗಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಜನರು ಕೊರೊನಾ ವೈರಸ್ ಭೀತಿಗೆ ಈಗ ಊರಿಗೆ ಮರಳಿದ್ದಾರೆ.
ಊರಿಗೆ ಮರಳಿ ಬರುತ್ತಿರುವ ಮಂದಿಯಿಂದ ಕೊರೊನಾ ಸೋಂಕು ಹರಡೋ ಭೀತಿ ಇರುವ ಹಿನ್ನೆಲೆ ತಪಾಸಣೆ ಮಾಡಿಸಿಕೊಂಡು, ವೈದ್ಯರಿಂದ ಕೊರೊನಾ ಸೋಂಕು ತಗುಲಿಲ್ಲವೆಂದ ದೃಢಕರಣ ಪತ್ರ ತೆಗೆದುಕೊಂಡು ಊರಿಗೆ ಬರುವಂತೆ ಗ್ರಾಮಸ್ಥರು ಕಟ್ಟಪ್ಪಣೆ ಹೊರಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೋವಾ, ಕೇರಳ ಮತ್ತು ಮಂಗಳೂರು ಭಾಗದಿಂದ ಬಂದ ನೂರಾರು ಜನರು ತಪಾಸಣೆಗಾಗಿ ಒಮ್ಮೆಲೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಒಂದೇ ಬಾರಿ ನೂರಾರು ಮಂದಿ ಆಸ್ಪತ್ರೆಗೆ ಆಗಮಿಸುತ್ತಿರುವುದರಿಂದ ಎಲ್ಲರಿಗೂ ಚಿಕಿತ್ಸೆ ನೀಡಿ, ವರದಿ ಕೊಡಲು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ನಾಲ್ವರು ವೈದ್ಯರು ಮತ್ತು 15ಕ್ಕೂ ಅಧಿಕ ಸಿಬ್ಬಂದಿ ಇದ್ದರೂ 300ಕ್ಕೂ ಅಧಿಕ ಮಂದಿ ಒಂದೇ ಬಾರಿ ಬಂದು ಕ್ಯೂ ನಿಂತ್ತಿರುವುದರಿಂದ ಎಲ್ಲರಿಗೂ ಏಕಕಾಲಕ್ಕೆ ಚಿಕಿತ್ಸೆ ನೀಡೋದು ಕಷ್ಟಕರವಾಗಿದೆ. ಆದರೂ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಯಾರಿಗೂ ತೊಂದರೆ ಆಗದಂತೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸುತ್ತಿದ್ದಾರೆ.