ಹಾವೇರಿ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಣ್ಣುಗಳು ಮಹತ್ವದ ಪಾತ್ರವಹಿಸುತ್ತವೆ. ಹೀಗಾಗಿ ಮರಣದ ನಂತರ ಎರಡು ಕಣ್ಣುಗಳನ್ನ ದಾನ ಮಾಡೋ ಮೂಲಕ ಹಾವೇರಿಯ ವೃದ್ಧೆಯೊಬ್ಬರ ಕುಟುಂಬ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಜಿಲ್ಲೆಯ ಹಾನಗಲ್ ಪಟ್ಟಣದ ನಿವಾಸಿ ಚಿನ್ನುಭಾಯಿ ನಾಮದೇವ ತಾಂದಳೆ(70) ನಿಧನರಾಗಿದ್ದರು. ಈ ನೋವಿನ ನಡುವೆಯೂ ವೃದ್ಧೆಯ ಎರಡು ಕಣ್ಣುಗಳನ್ನ ಕುಟುಂಬದ ಸದಸ್ಯರು ದಾನ ಮಾಡಿ ಈ ಸಾವಿಗೊಂದು ಅರ್ಥ ನೀಡಿದ್ದಾರೆ.
ಹಾನಗಲ್ ಪಟ್ಟಣದ ಸಿಂಪಿಗಲ್ಲಿಯಲ್ಲಿ ಬೆಳಗ್ಗೆ ವಯೋಸಹಜವಾಗಿ ಚಿನ್ನುಭಾಯಿ ನಿಧನ ಹೊಂದಿದ್ದರು. ಕುಟುಂಬ ಸದಸ್ಯರು ಚರ್ಚೆ ನಡೆಸಿ ತಾಯಿಯ ಎರಡು ಕಣ್ಣುಗಳನ್ನ, ಶಿರಸಿಯ ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿದ್ದಾರೆ. ತಾಯಿ ನಮ್ಮ ಜೊತೆಗಿಲ್ಲ, ಆದರೆ ಅವರ ಕಣ್ಣು ಇನ್ನೊಬ್ಬರ ಜೀವನಕ್ಕೆ ಬೆಳಕಾಗಲಿ ಎಂದು ಮಕ್ಕಳು ಈ ಅಮೂಲ್ಯ ಕಾರ್ಯ ಮಾಡಿ ಮಾದರಿಯಾಗಿದ್ದಾರೆ.