ಹಾವೇರಿ: ವಯಸ್ಸು ಎಲ್ಲರಿಗೂ ಆದಂತೆ ಅವರಿಗೂ ಆಗಿದೆ. ಯಾವುದೇ ಚರ್ಚೆ ಇಲ್ಲ. ಸಿಎಂ ಯಡಿಯೂರಪ್ಪ ಅವರೇ ನಮ್ಮ ಪ್ರಶ್ನಾತೀತ ನಾಯಕರು. ಅವರೇ ನಮ್ಮ ಮುಖ್ಯಮಂತ್ರಿ. ಪಕ್ಷ ಮತ್ತು ಸರ್ಕಾರ ಒಟ್ಟಾಗಿ ನಡೆಯುತ್ತೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ವೈ ಅವರೇ ನಮ್ಮ ಮುಖ್ಯಮಂತ್ರಿಗಳಾಗಿ ಇರುತ್ತಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚರ್ಚೆಗಳು ಸ್ವಾಭಾವಿಕವಾಗಿ ಬಂದಿರಬಹುದು. ನಮ್ಮ ಪಕ್ಷದವರು ಪತ್ರ ಬರೆದಿರಲಿಕ್ಕಿಲ್ಲ. ಯಾರಾದರೂ ಬೇರೆಯವರು ಮಾಡಿರಬಹುದು. ಚರ್ಚೆ ಆಗುತ್ತೆ, ಅಂತಿಮವಾಗಿ ಯಡಿಯೂರಪ್ಪ ಅವರೇ ನಮ್ಮ ಪ್ರಶ್ನಾತೀತ ನಾಯಕ. ನಾವೆಲ್ಲ ಅವರ ಜೊತೆ ಹೆಜ್ಜೆ ಹಾಕುತ್ತೇವೆ. ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂದರು.
ನಂತರ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಭಾರತಕ್ಕೆ ಬಂದಿದ್ದು ಪ್ರಧಾನಿ ಅವರ ಜೊತೆ ಮಾತನಾಡಿದ್ದು ದೇಶದ ಗೌರವ ಹೆಚ್ಚಿಸಿದೆ. ಕುಮಾರಸ್ವಾಮಿ ಇದ್ದಾಗ ಯಾರಾದರೂ ಬಂದರೆ ಖರ್ಚು ಮಾಡ್ತಿರಲಿಲ್ವಾ? ವಿರೋಧ ಪಕ್ಷದಲ್ಲಿದ್ದಾರೆ. ವಿರೋಧ ಮಾಡಬೇಕೆಂದು ಮಾಡಿದ್ದಾರಷ್ಟೆ. ಮಾರ್ಚ್ನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವುದು ಪರಮಾಧಿಕಾರಿ ಪಕ್ಷದ ಹೈಕಮಾಂಡ್, ರಾಜ್ಯಾಧ್ಯಕ್ಷರು ಮತ್ತು ಸಿಎಂಗೆ ಇದೆ. ಅವರು ತೆಗೆದುಕೊಳ್ಳೋ ನಿರ್ಧಾರಕ್ಕೆ ನಾವೆಲ್ಲ ಬೆಂಬಲಿಸ್ತೇವೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.