ನದಿ ನೀರುಪಾಲಾಗಿದ್ದ ರೈತನ ಮೃತದೇಹ 17 ದಿನಗಳ ಬಳಿಕ ಪತ್ತೆ

Public TV
1 Min Read
HVR

ಹಾವೇರಿ: ಧರ್ಮಾ ನದಿಯ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದ ರೈತನ ಮೃತದೇಹವು 17 ದಿನದ ಬಳಿಕ ಪತ್ತೆಯಾದ ಘಟನೆ ಹಾನಗಲ್ ತಾಲೂಕು ಶೃಂಗೇರಿ ಗ್ರಾಮದಲ್ಲಿ ನಡೆದಿದೆ.

ಶೃಂಗೇರಿ ಗ್ರಾಮದ ಶಿವಪ್ಪ ಸೊಟ್ಟಕ್ಕನವರ (50) ನೀರುಪಾಲಾಗಿದ್ದ ರೈತ. ಧರ್ಮಾ ನದಿ ಪ್ರವಾಹಕ್ಕೆ ಸಿಲುಕಿದ್ದ ಶಿವಪ್ಪ ಅವರು ಆಗಸ್ಟ್ 6ರಂದು ನೀರುಪಾಲಾಗಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಅವರ ಮೃತ ದೇಹವು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಶಿವಪ್ಪ ಅವರು ಆಗಸ್ಟ್ 6ರಂದು ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಧರ್ಮಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಶಿವಪ್ಪ ಏಕಾಏಕಿ ಕಾಲು ಜಾರಿ ನದಿಗೆ ಬಿದ್ದಿದ್ದರು. ಅವರ ಮೃತದೇಹ ಪತ್ತೆಗಾಗಿ ಜಿಲ್ಲಾಡಳಿತ ಹಾಗೂ ಕುಟುಂಬಸ್ಥರು ಎಲ್ಲ ರೀತಿಯ ಪ್ರಯತ್ನ ಮಾಡಿದ್ದರೂ ಸಿಕ್ಕಿರಲಿಲ್ಲ.

HVR A

ನದಿಯ ನೀರಿನ ಮಟ್ಟವು ಕಡಿಮೆಯಾಗಿದ್ದರಿಂದ ಶುಕ್ರವಾರ ಶಿವಪ್ಪ ಅವರ ಮೃತದೇಹವು ನದಿಯಲ್ಲಿ ಪತ್ತೆಯಾಗಿತ್ತು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಮತ್ತು ಹಾನಗಲ್ ಪೊಲೀಸರು, ಮೃತ ದೇಹವು ಶಿವಪ್ಪ ಅವರದ್ದೇ ಎಂದು ಖಚಿತ ಪಡಿಸಿದ್ದಾರೆ.

ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶಿವಪ್ಪ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ತಹಶೀಲ್ದಾರ್ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *