ಹಾವೇರಿ: ಸಿದ್ದರಾಮಯ್ಯ ನಮ್ಮಿಂದ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಬೋಗಾವಿ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಸಿದ್ದರಾಮಯ್ಯ ಯಾರದೋ ಹೆಸರಿನ ಬಂಗಲೆಯಲ್ಲಿ ಇದ್ದರು. ನಾವು ರಾಜೀನಾಮೆ ಕೊಟ್ಟಿದ್ದಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿದೆ. ಸ್ವಂತ ಕಾರು ಬಿಟ್ಟು ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಿದರು.
2004ರಿಂದ ಪಕ್ಷ ಸಂಘಟನೆಯಲ್ಲಿ ಸಿದ್ದರಾಮಯ್ಯ ನಾವು ಒಂದಾಗಿದ್ದೆವು. ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ನಾವು ಅವರನ್ನು ಬಿಟ್ಟು ಬಂದಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವ ಇದೆ. ನಾವು ಯಾರು ಸಿದ್ದರಾಮಯ್ಯರ ಬೆನ್ನಿಗೂ ಚೂರಿ ಹಾಕಿಲ್ಲ. ಅವರಿಗೆ ನಾವು ಒಳ್ಳೆಯದನ್ನೆ ಮಾಡಿದ್ದೇವೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ದೇವೇಗೌಡರು ಒಂದಾಗಿದ್ದರು. ಸಿದ್ದರಾಮಯ್ಯ ಅವರಿಂದ ಹೊರಬಂದು ತೊಡೆತಟ್ಟಿದರು ಎಂದು ತಿಳಿಸಿದರು.
ಯಾವ ಕಾಲಕ್ಕೂ ದೇವೇಗೌಡರು ಸಿದ್ದರಾಮಯ್ಯರನ್ನ ಸಿಎಂ ಮಾಡುತ್ತ ಇರಲಿಲ್ಲ. ಯಡಿಯೂರಪ್ಪ ಅವರದ್ದು ದೊಡ್ಡ ಗುಣ. ನಾವು ರಾಜೀನಾಮೆ ಕೊಟ್ಟಿದ್ದಕ್ಕೆ ಸಿಎಂ ನಮ್ಮ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ. ನಮ್ಮ ತಾಲೂಕಿಗೆ ಮೂವತ್ತು ವರ್ಷಗಳಿಂದ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಈಗ ಯಡಿಯೂರಪ್ಪ ಮಂತ್ರಿ ಸ್ಥಾನ ಕೊಡುತ್ತೇನೆ ಅಂದಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.