ದಾವಣಗೆರೆ: ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ದಯವಿಟ್ಟು ಭಿನ್ನಾಭಿಪ್ರಾಯಗಳನ್ನು ಕೈ ಬಿಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಮನವಿ ಮಾಡಿಕೊಂಡರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಆತ್ಮೀಯ ಸ್ನೇಹಿತರು ಕೇಂದ್ರ ಸಚಿವರಾಗಿರುವ ಅನುಭವ ಇದೆ. ನಿಮ್ಮ ಬಗ್ಗೆ ಗೌರವವಿದೆ, ನಾನು ವಿನಂತಿ ಮಾಡುತ್ತೇನೆ. ನಮ್ಮ ಸಂಘರ್ಷದಿಂದಲೇ ಕಳೆದ ಬಾರಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಪ್ರತಿ ಬಾರಿ ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಹೇಳಿದರು.
ವಿಜಯೇಂದ್ರ (BY Vijayendra) ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಎಲ್ಲರೂ ಒಟ್ಟಾಗಿ ಮಾಡಿದ್ದಾರೆ. ಮುಂದಿನ ಲೋಕಸಭೆಗೆ 28 ಸ್ಥಾನ ಗೆಲ್ಲ ಬೇಕು. ಯತ್ನಾಳ್ ಜೆಡಿಎಸ್ ಗೆ ಹೋದಾಗ ಯಡಿಯೂರಪ್ಪನವರು ಪಕ್ಷಕ್ಕೆ ವಾಪಸ್ ಕರೆ ತಂದಿದ್ದರು. ಆದರೆ ಯಡಿಯೂರಪ್ಪನವರ (BS Yediyurappa) ಬಗ್ಗೆ ಪದೇ ಪದೇ ಟೀಕೆ ಮಾಡಿದರೆ ಒಳ್ಳೆಯದಲ್ಲ. ಈ ರೀತಿ ಟೀಕೆ ಮಾಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂದು ತಿಳಿಸಿದರು.
ಇನ್ನಾದರೂ ಒಟ್ಟಾಗಿ ಹೋಗುವ ಮೂಲಕ ಭಿನ್ನಾಭಿಪ್ರಾಯ ಕೈ ಬಿಡಬೇಕೆಂದು ರೇಣುಕಾಚಾರ್ಯ ಅವರು ಯತ್ನಾಳ್ ಜೊತೆ ವಿನಂತಿ ಮಾಡಿಕೊಂಡರು. ಇದನ್ನೂ ಓದಿ: ಕರ್ನಾಟಕದಲ್ಲಿ ನಮ್ಮ ಮುಟ್ಟಾಳತನದಿಂದಲೇ ಅಧಿಕಾರ ಕಳೆದುಕೊಂಡ್ವಿ – ಈಶ್ವರಪ್ಪ