ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ: ಹೇಮಂತ್ ಸೊರೆನ್

Public TV
1 Min Read
Hemant Soren JMM

ರಾಂಚಿ: ಜಾರ್ಖಂಡ್‌ನ ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿದ್ದೇವೆ ಎಂದು ಇಲ್ಲಿನ ಸಿಎಂ ಹೇಮಂತ್ ಸೊರೆನ್ (Hemant Soren) ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ (Assembly Elections) ಮತಗಟ್ಟೆ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ವಿಜಯ ಸಾಧಿಸಿದ ಬಳಿಕ ಮಾತನಾಡಿದ ಅವರು, ನಾವು ಜಾರ್ಖಂಡ್‌ನಲ್ಲಿ ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ. ಚುನಾವಣಾ ಫಲಿತಾಂಶದ ನಂತರ ನಾವು ನಮ್ಮ ಕಾರ್ಯತಂತ್ರವನ್ನು ಅಂತಿಮಗೊಳಿಸುತ್ತೇವೆ. ಈ ಅದ್ಭುತ ಪ್ರದರ್ಶನಕ್ಕಾಗಿ ನಾನು ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಾರ್ಖಂಡ್ ‘ಅಬುವಾ ರಾಜ್, ಅಬುವಾ ಸರ್ಕಾರ್’ (ಸ್ವಂತ ರಾಜ್ಯ, ಸ್ವಂತ ಸರ್ಕಾರ) ಸ್ಕ್ರಿಪ್ಟ್ ಮಾಡಲು ಸಿದ್ಧವಾಗಿದೆ ಎಂದರು. ಇದನ್ನೂ ಓದಿ: 14 ರಾಜ್ಯಗಳ 48 ಕ್ಷೇತ್ರಗಳಿಗೆ ಉಪಚುನಾವಣೆ – 23 ಕ್ಷೇತ್ರಗಳಲ್ಲಿ ಎನ್‌ಡಿಎ ಕಮಾಲ್

Hemant Soren JMM 1

ಆದಿವಾಸಿಗಳ ನಾಡು ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿ ಕೂಟ ಮತ್ತೊಮ್ಮೆ ಗೆಲುವಿನ ನಗಾರಿ ಬಾರಿಸಿದೆ. ಇಡಿ ಕೇಸ್, ಬಂಧನ, ಬಂಡಾಯ, ಆಪರೇಷನ್ ಕಮಲ ಎದುರಾಳಿಗಳ ನಾನಾ ವ್ಯೂಹ, ಹೀಗೆ ಹಲವು ಸವಾಲುಗಳನ್ನು ಎದುರಿಸಿದ ಜಾರ್ಖಂಡ್ ಮುಕ್ತಿ ಮೋರ್ಚಾ, ಮತಗಟ್ಟೆ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ವಿಜಯವನ್ನು ಸಾಧಿಸಿದೆ. ಬಂಟಿ ಔರ್ ಬಬ್ಲಿ ಖ್ಯಾತಿಯ ಹೇಮಂತ್ ಸೊರೆನ್-ಕಲ್ಪನಾ ಜೋಡಿ ಸೂಪರ್ ಮ್ಯಾಜಿಕ್ ಮಾಡಿದೆ. ರಾಜಕೀಯ ಅಸ್ಥಿರತೆಗೆ ಕೇರಾಫ್ ಅಡ್ರೆಸ್ ಆಗಿರುವ ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ಜೆಎಂಎಂ ಸ್ಪಷ್ಟವಾದ ಬಹುಮತ ಗಳಿಸಿ ಮತ್ತೊಮ್ಮೆ ಸರ್ಕಾರ ರಚನೆಗೆ ಸಜ್ಜಾಗುತ್ತಿದೆ. ಇಲ್ಲಿ ವಲಸೆವಾದ ಇತರೆ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚುನಾವಣೆ ಮಾಡಿದ್ದ ಬಿಜೆಪಿ ವಿರುದ್ಧ ಜನಾದೇಶ ಬಂದಿದೆ. ಮಾಜಿ ಸಿಎಂ ಚಂಪಾಯ್ ಸೊರೆನ್, ಹೇಮಂತ್ ಸೊರೆನ್ ಅತ್ತಿಗೆ ಸೀತಾ ಸೊರೆನ್ ಪಕ್ಷಾಂತರ ಬಿಜೆಪಿಗೆ ವರವಾಗಲಿಲ್ಲ. ಎಸ್‌ಟಿ-ಎಸ್‌ಸಿ ಮೀಸಲು ಕ್ಷೇತ್ರಗಳು ಜೆಎಂಎಂ ಮೈತ್ರಿಕೂಟದ ಕೈ ಹಿಡಿದಿವೆ. ಬರ್ಹೈತ್‌ನಿಂದ ಸ್ಪರ್ಧಿಸಿದ್ದ ಹೇಮಂತ್ ಸೊರೆನ್ 39,791 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್, ವಯನಾಡಲ್ಲಿ ಕಾಂಗ್ರೆಸ್ ಗೆಲುವಿಗೆ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ

ಜಾರ್ಖಂಡ್ ಫಲಿತಾಂಶ (81)
* ಐಎನ್‌ಡಿಐಎ- 56
* ಎನ್‌ಡಿಎ- 24
* ಇತರೆ – 01

Share This Article