ಲಕ್ನೋ: ಹತ್ರಾಸ್ (Hathras) ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ (Uttar Pradesh) ವಿಶೇಷ ನ್ಯಾಯಾಲಯವು ಮೂವರನ್ನು ಖುಲಾಸೆಗೊಳಿಸಿದ್ದು, ಓರ್ವನನ್ನು ಅಪರಾಧಿ ಎಂದು ತೀರ್ಪು ನೀಡಿದೆ.
ಆರೋಪಿಗಳಾದ ರಾಮು, ಲವಕುಶ ಮತ್ತು ರವಿ ಅವರನ್ನು ಖುಲಾಸೆಗೊಳಿಸಲಾಗಿದ್ದು, ಆರೋಪಿ ಸಂದೀಪ್ ಅವರನ್ನು ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಇದನ್ನೂ ಓದಿ: ಅತ್ತಿಗೆಯೊಂದಿಗೆ ಸಂಬಂಧ ಹೊಂದಿಲ್ಲ – ಸಾಬೀತುಪಡಿಸಲು ಅಗ್ನಿಪರೀಕ್ಷೆ ಮಾಡಿಕೊಂಡ ಭೂಪ
ಸಂತ್ರಸ್ತೆಯ ಮೇಲೆ ಸೆಪ್ಟೆಂಬರ್ 14, 2020 ರಂದು ಹತ್ರಾಸ್ನಲ್ಲಿ 19 ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆರೋಪಿಗಳು ಅವಳನ್ನು ಕೊಲ್ಲಲು ಪ್ರಯತ್ನಿಸಿದ್ದರು. ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ಸಾವನ್ನಪ್ಪಿದ್ದಳು. ಆಕೆಯ ಶವವನ್ನು ಯುಪಿ ಪೊಲೀಸರು ಮತ್ತು ಜಿಲ್ಲಾಡಳಿತವು ಕುಟುಂಬದ ಒಪ್ಪಿಗೆ ಪಡೆಯದೇ ಅವರ ಅನುಪಸ್ಥಿತಿಯಲ್ಲಿ ಸುಟ್ಟು ಹಾಕಿತ್ತು.
ಬಲವಂತದ ಶವಸಂಸ್ಕಾರ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ (Gang rape) ಸಂಬಂಧಿಸಿದಂತೆ, ಅಲಹಾಬಾದ್ ಹೈಕೋರ್ಟ್ 2020ರ ಅಕ್ಟೋಬರ್ 1 ರಂದು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತ್ತು. 2020ರ ಸೆಪ್ಟೆಂಬರ್ 29 ರಂದು ಸಂತ್ರಸ್ತೆಯ ಮರಣದ ನಂತರ ಆಕೆಯ ಅಂತ್ಯಕ್ರಿಯೆಗೆ ಕಾರಣವಾದ ಘಟನೆಗಳು ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸಿವೆ, ಆದ್ದರಿಂದ ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೈಕೋರ್ಟ್ ಹೇಳಿತ್ತು.
ಅಕ್ಟೋಬರ್ 10 ರಂದು ಅಲಹಾಬಾದ್ ಹೈಕೋರ್ಟ್ (Allahabad High Court) ಈ ಪ್ರಕರಣವನ್ನು ಸಿಬಿಐಗೆ (Central Bureau of Investigation) ವಹಿಸಿತ್ತು. ತನಿಖೆ ನಡೆಸಿದ್ದ ಸಿಬಿಐ ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಡಿಸೆಂಬರ್ 2020ರಲ್ಲಿ ಚಾರ್ಜ್ಶೀಟ್ ಸಲ್ಲಿಸಿತ್ತು. ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ