– ಹೃದಯಾಘಾತ ಸಾವಿನ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿಲ್ಲ
– ಮೇ ಮತ್ತು ಜೂನ್ ತಿಂಗಳಿನಲ್ಲಿ 24 ಮಂದಿ ಸಾವು
ಬೆಂಗಳೂರು: ಹಾಸನ ಸರಣಿ ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ (Cardiac Arrest) ತನಿಖಾ ವರದಿ ಬಹಿರಂಗವಾಗಿದೆ. ವಾಯು ಮಾಲಿನ್ಯ ಮತ್ತು ಸದಾ ಕುಳಿತುಕೊಂಡಿರುವುದರಿಂದ ಆಟೋ ಚಾಲಕರು, ಕ್ಯಾಬ್ ಚಾಲಕರಿಗೆ (Cab Drivers) ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ವರದಿ ಹೇಳಿದೆ.
ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೊಳಗಾಗುತ್ತಿರುವ ಪ್ರಕರಣಗಳ ಹೆಚ್ಚಳಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ನಿಖರ ಕಾರಣ ತಿಳಿಸುವಂತೆ ಆರೋಗ್ಯ ಇಲಾಖೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ರವೀಂದ್ರ ನಾಥ್ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಿತ್ತು.
ವರದಿಯಲ್ಲಿ ಏನಿದೆ?
ಮೇ ಮತ್ತು ಜೂನ್ ತಿಂಗಳಿನಲ್ಲಿ 24 ಮಂದಿ ಮೃತಪಟ್ಟಿದ್ದರು. ಈ ಪೈಕಿ 45 ವರ್ಷದ ಕೆಳಗಡೆ 24 ಮಂದಿ ಮೃತಪಟ್ಟರೆ 45 ವರ್ಷ ಮೇಲ್ಪಟ್ಟು 10 ಮಂದಿ ಸಾವನ್ನಪ್ಪಿದ್ದರು. ಮೃತರ ಪೈಕಿ 7 ಮಂದಿ ಬೆಂಗಳೂರಿನಲ್ಲಿ ವಾಸವಾಗಿದ್ದರು.
24 ಮಂದಿಯಲ್ಲಿ ನಾಲ್ಕು ಮಂದಿ ಬೇರೆ ಕಾರಣಕ್ಕೆ ಮೃತಪಟ್ಟಿದ್ದಾರೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ರಸ್ತೆ ಅಪಘಾತ, ಜಠರದ ಸೋಂಕು, ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದಾರೆ.
ಉಳಿದ 20 ಮಂದಿಯಲ್ಲಿ 10 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಪೈಕಿ ಮೂವರು ಮೊದಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಉಳಿದ 7 ಮಂದಿಯಲ್ಲಿ ನಾಲ್ಕು ಮಂದಿ ಹೃದಯಾಘಾತದಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಎಲೆಕ್ಟ್ರೋಕಾರ್ಡಿಯೋಗ್ರಾಮ್ ದಾಖಲೆಗಳಿಂದ ಮೂವರು ಹೃದಯಾಘಾತಕ್ಕೆ ಮೃತಪಟ್ಟಿರುವುದು ಸಾಬೀತಾಗಿದೆ. ಇದನ್ನೂ ಓದಿ: ಫ್ರೀ ರೇಷನ್ ಕಾರ್ಡ್ ಅಂದ್ರು, ಈಗ 100, 200 ರೂ. ತೆಗೆದುಕೊಂಡ್ರು – ಜಿಲ್ಲಾಧ್ಯಕ್ಷನಿಗೆ ಚಳಿ ಬಿಡಿಸಿದ ಮಹಿಳೆ
ಮೃತ 24 ಜನರಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೃತರಲ್ಲಿ 6 ಜನ (33%) ಆಟೋ ಮತ್ತು ಕ್ಯಾಬ್ ಚಾಲಕರಿದ್ದಾರೆ. ಸರಿಯಾದ ಸಮಯದಲ್ಲಿ ಊಟ ಮಾಡದೇ ಇರುವುದು, ಸರಿಯಾಗಿ ನಿದ್ರೆ ಮಾಡದೇ ಇರುವದು, ಒತ್ತಡದಲ್ಲಿ ಕೆಲಸ ಮಾಡುವುದು ಹಠಾತ್ ಸಾವಿಗೆ ಕಾರಣವಾಗಿರಬಹುದು. ವಾಯು ಮಾಲಿನ್ಯದ ಜೊತೆ ಸದಾ ವಾಹನದಲ್ಲಿ ಕುಳಿತಿರುತ್ತಾರೆ. ಹೀಗಾಗಿ ವಾಹನ ಚಾಲಕರು ರಿಸ್ಕ್ ಕೆಟಗೆರಿಯಲ್ಲಿ ಇದ್ದಾರೆ.
ಹೃದಯಾಘಾತ ಮತ್ತು ಸಾವುಗಳ ಸಂಖ್ಯೆಯ ದತ್ತಾಂಶದ ವಿವರವಾದ ವಿಶ್ಲೇಷಣೆ ಮಾಡಿದಾಗ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದ ಸಾವುಗಳಲ್ಲಿ ಯಾವುದೇ ಹೆಚ್ಚಳವನ್ನು ಸೂಚಿಸುವುದಿಲ್ಲ. ಹಾಸನದಲ್ಲಿ ಹಿಂದಿನ ತಿಂಗಳಿನಂತೆಯೇ ಇದೆ.
ಮೃತರಾದವರಲ್ಲಿ 75% ಕ್ಕಿಂತ ಹೆಚ್ಚು ಮಂದಿ ಒಂದಕ್ಕಿಂತ ಹೆಚ್ಚು ಹೃದಯ ಸಂಬಂಧಿ ಅಪಾಯಕಾರಿ ಅಂಶಗಳನ್ನು ಹೊಂದಿದ್ದರು. ಇವುಗಳಲ್ಲಿ ಮಧುಮೇಹ , ಸ್ಥೂಲಕಾಯತೆ, ಮದ್ಯಪಾನ,ಧೂಮಪಾನ, ಅಧಿಕ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ
ಶವಪರೀಕ್ಷೆಯ ದತ್ತಾಂಶ, ಕ್ಲಿನಿಕಲ್ ಡೇಟಾ ಮತ್ತು ಕುಟುಂಬ ಸದಸ್ಯರಿಂದ ಸೀಮಿತ ಮಾಹಿತಿ ಕೊರತೆಯಿಂದಾಗಿ ಪ್ರತಿಯೊಂದು ಪ್ರಕರಣದಲ್ಲೂ ಸಾವಿಗೆ ನಿಖರ ಕಾರಣ ನೀಡಲು ಸಾಧ್ಯವಾಗಿಲ್ಲ.
ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗಳನ್ನು ಸಾವಿಗೆ ಮೊದಲು ಯಾವುದೇ ಆರೋಗ್ಯ ಕೇಂದ್ರಕ್ಕೆ ಕರೆ ತಂದಿಲ್ಲ. ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟವರಲ್ಲಿಯೂ ಸಹ ಔಪಚಾರಿಕ ಮರಣೋತ್ತರ ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸಲಾಗಿಲ್ಲ. ಶವಪರೀಕ್ಷೆಯ ದತ್ತಾಂಶದ ಕೊರತೆಯಿಂದಾಗಿ ಇವರು ನಿಜವಾಗಿಯೂ ಹೃದಯ ಸಂಬಂಧಿತ ಸಾವುಗಳೇ ಅಥವಾ ಬೇರೆ ಕಾರಣಗಳಿಂದಾಗಿಯೇ ಎಂಬುದನ್ನು ದೃಢೀಕರಿಸಲು ಸಾಧ್ಯವಿಲ್ಲ.
ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಹೃದಯಾಘಾತವಾಗಿಲ್ಲ. ಕಳೆದ ವರ್ಷ ಇಷ್ಟೇ ಪ್ರಕರಣಗಳು ದಾಖಲಾಗಿದ್ದವು. ಮೈಸೂರು ಜಯದೇವ, ಬೆಂಗಳೂರು ಜಯದೇವ ಕಳೆದ ಆರು ತಿಂಗಳಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ
ಹೃದಯಘಾತಕ್ಕೆ ಕಾರಣ ಏನು?
ಮೊದಲೇ ಹೃದಯ ಸಂಬಂಧಿ ಕಾಯಿಲೆ, ಧೂಮಪಾನ, ಮದ್ಯಪಾನ, ಡಯಾಬಿಟಿಸ್, ಸ್ಥೂಲಕಾಯ, ಬಿಪಿ, ಅನುವಂಶೀಯ ಕಾಯಿಲೆಯಿಂದ ಮೃತಪಟ್ಟಿರುವ ಸಾಧ್ಯತೆಯಿದೆ.
ಸಲಹೆ ಏನು?
ಹೃದಯಾಘಾತ ನಿಯಂತ್ರಣಕ್ಕೆ ಹಾಸನ ತನಿಖಾ ವರದಿ ಆಧರಿಸಿ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಕೆಲವೊಂದು ಸಲಹೆ ಕೊಟ್ಟಿದೆ. ಆಟೋ ಮತ್ತು ಕ್ಯಾಬ್ ಚಾಲಕರಿಗೆ ಹೃದಯ ತಪಾಸಣೆ ಆಯೋಜನೆ ಮಾಡಬೇಕು. 15 ವರ್ಷ ಮಕ್ಕಳಿಗೆ ಹೃದಯರಕ್ತನಾಳದ ತಪಾಸಣೆ ಮಾಡಬೇಕು. ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಇಸಿಜಿ ಅಳವಡಿಸಬೇಕು. ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು.