ಹಾಸನ: ಹೊಸದಾಗಿ ಭಾರತಕ್ಕೆ ಆಗಮಿಸಿರುವ ಕೊರೊನಾ ಎರಡನೇ ತಳಿ ಬಗ್ಗೆ ಡಾಕ್ಟರ್ ಸೂರಜ್ ರೇವಣ್ಣ ಎಚ್ಚರಿಕೆ ನೀಡಿದ್ದು ಸುರಕ್ಷತಾ ಕ್ರಮ ಅನುಸರಿಸುವಂತೆ ತಿಳಿಸಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಆಟೋಚಾಲಕರು, ಸವಿತಾ ಸಮಾಜದವರು ಸೇರಿದಂತೆ ಸಾವಿರಾರು ಜನರಿಗೆ ಫುಡ್ಕಿಟ್ ಹಂಚಿದ ನಂತರ ಮಾತನಾಡಿದ ಅವರು, ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜನ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ನಾನೊಬ್ಬ ಡಾಕ್ಟರ್ ಆಗಿ ಹೇಳುತ್ತಿದ್ದೇನೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ. ಕೊರೊನಾದ ಎರಡೇ ಎರಡು ತಳಿಗಳ ಬಗ್ಗೆ ಈಗ ಯೋಚನೆ ಮಾಡಬೇಕು. ಈ ಎರಡು ತಳಿಗಳು ಮನುಷ್ಯನ ಶ್ವಾಸಕೋಶಕ್ಕೆ ಅತೀ ಹೆಚ್ಚು ಹಾನಿ ಮಾಡುತ್ತಿವೆ. ನಾವು ಈಗ ಗ್ರೀನ್ ಜೋನ್ನಲ್ಲಿ ಇದ್ದರೂ ಶಾಶ್ವತವಾಗಿ ಗ್ರೀನ್ ಜೋನ್ ನಲ್ಲಿ ಇರುತ್ತೇವೆ ಎಂದು ಹೇಳಲು ಆಗಲ್ಲ. ಈಗ ಎರಡನೇ ರೀತಿಯ ಕೊರೊನಾ ತಳಿ ಭಾರತಕ್ಕೆ ಎಂಟ್ರಿಯಾಗಿದೆ ಎಂದು ತಿಳಿಸಿದರು.
ಮೊದಲು ಬಂದ ಕೊರೊನಾಕ್ಕೂ ಈಗ ಎಂಟ್ರಿಯಾಗಿರುವ ಕೊರೊನಾ ತಳಿಗೂ ವ್ಯತ್ಯಾಸವಿದೆ. ಭಾರತಕ್ಕೆ ಇಪ್ಪತ್ತು ದಿನದ ಹಿಂದೆ ಹೊಸ ಎರಡನೇ ತಳಿಯೂ ಬಂದಿದ್ದು, ಜನರು ಎಚ್ಚರಿಕೆಯಿಂದ ಇದ್ದು ಕೊರೊನಾ ವಿರುದ್ಧ ಹೋರಾಟ ಮಾಡಬೇಕು ಎಂದು ಸೂರಜ್ ರೇವಣ್ಣ ಮನವಿ ಮಾಡಿದರು.