ಹಾಸನ: ಮನೆಯೊಂದರ ಬಾಗಿಲು ಒಡೆದು ಕಳ್ಳತನ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಸಂತ್ ಎಂಬವರ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು, ಮನೆಯ ಬೀರು ಒಡೆದು ಅದರಲ್ಲಿದ್ದ ಸುಮಾರು 50,000ರೂ. ನಗದು, 120 ಗ್ರಾಂ ಚಿನ್ನ ಹಾಗೂ 25 ಗ್ರಾಂ ಬೆಳ್ಳಿಯನ್ನು ದೋಚಿದ್ದಾರೆ.
ಮನೆಯವರು ಮನೆ ಹಿಂಭಾಗದಲ್ಲಿರುವ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಮನೆಯವರಿಗೆ ಯಾವುದೆ ರೀತಿಯ ಅರಿವು ಬರದಂತೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಇದೀಗ ಮಗನ ವಿದ್ಯಾಭ್ಯಾಸಕ್ಕೆ ಕೂಡಿಟ್ಟಿದ್ದ ಹಣ ಕಳೆದುಕೊಂಡು ಮನೆಯವರು ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.