ಹಾಸನ: ಛತ್ತೀಸಗಡದ ಸುಕ್ಮಾದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮನಾದ ಹಾಸನದ ಯೋಧ ಚಂದ್ರು ಅವರ ಪಾರ್ಥೀವ ಶರೀರ ಇನ್ನೇನು ಕೆಲವೇ ಕ್ಷಣಗಳಲ್ಲಿ ಹುಟ್ಟೂರು ತಲುಪಿದೆ. ಬುಧವಾರ ಸಂಜೆ ಮಿಲಿಟರಿ ಅಧಿಕಾರಿಗಳ ನೇತೃತ್ವದಲ್ಲಿ ಬಂದ ಯೋಧನ ಪಾರ್ಥಿವ ಶರೀರವನ್ನು ಸಚಿವ ಎ. ಮಂಜು, ಶಾಸಕ ಪ್ರಕಾಶ್, ಡಿಸಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವರು ಬರಮಾಡಿಕೊಂಡಿದ್ರು.
ಸದ್ಯ ಹಾಸನ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಪಾರ್ಥಿವ ಶರೀರವನ್ನು ಅರಕಲಗೂಡಿಗೆ ರವಾನಿಸಲಾಗುತ್ತದೆ. ಅರಕಲಗೂಡು ಪಟ್ಟಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕೊಟ್ಟು ಬಳಿಕ ಮೆರವಣಿಗೆ ಸಾಗಲಿದೆ.
ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಲಿದೆ. ಯೋಧನನನ್ನು ಕಳೆದುಕೊಂಡ ಸ್ವಗ್ರಾಮದಲ್ಲಿ ನೀರವ ಮೌನವಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಂಗಳವಾರ ನಕ್ಸಲರು ಸಿಆರ್ ಪಿಎಫ್ ನ 212 ಬೆಟಾಲಿಯನ್ ಮುಖ್ಯ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 9 ಯೋಧರು ಮೃತಪಟ್ಟು, 6 ಯೋಧರು ತೀವ್ರವಾಗಿ ಗಾಯಗೊಂಡಿದ್ದರು.