ಹಾಸನ: ಕಷ್ಟ ಪಟ್ಟು ದುಡಿದ ಉಳಿತಾಯದ ಹಣವನ್ನು ಪೋಸ್ಟ್ ಮಾಸ್ಟರ್ ಓರ್ವ ದುರುಪಯೋಗ ಮಾಡಿಕೊಂಡಿರುವ ಆರೋಪ ಹಾಸನದ ಸಾಲಗಾಮೆ ಅಂಚೆ ಕಚೇರಿಯಲ್ಲಿ ಕೇಳಿಬಂದಿದೆ.
ಹಲವಾರು ವರ್ಷಗಳಿಂದ ಸಾಲಗಾಮೆ ಗ್ರಾಮದಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು 8 ಸಾವಿರ ಉಳಿತಾಯ ಖಾತೆಗಳಿವೆ. ಇಲ್ಲಿ ಅಂಚೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಚಂದ್ರು ಗ್ರಾಹಕರ ಹಣದಲ್ಲಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ.
ಸದ್ಯ ಚಂದ್ರ ಬೇರೆ ಪೋಸ್ಟ್ ಆಫೀಸ್ ವರ್ಗವಾಗಿದ್ದು ನಂತರ ಈ ಅವ್ಯವಹಾರ ಬೆಳಕಿಗೆ ಬಂದಿದೆ. ತಮ್ಮ ಉಳಿತಾಯ ಖಾತೆಯ ಹಣವನ್ನು ಪಡೆಯಲು ಪೋಸ್ಟ್ ಆಫೀಸ್ಗೆ ಬಂದ ಗ್ರಾಹಕರಿಗೆ ಖಾತೆಯಲ್ಲಿ ಹಣವೇ ಇಲ್ಲದ್ದನ್ನು ನೋಡಿ ಶಾಕ್ ಆಗಿದ್ದಾರೆ.
ಪಾಸ್ ಬುಕ್ನಲ್ಲಿ ಹಣ ಜಮಾವಣೆಯಾದ ಬಗ್ಗೆ ದಾಖಲೆ ಇದ್ದರೆ ಕಂಪ್ಯೂಟರ್ ನಲ್ಲಿ ಮಾತ್ರ ಹಣವನ್ನು ಸೇರಿಸಲಾಗಿಲ್ಲ. ಹೊಸದಾಗಿ ಬಂದಿರುವ ಅಂಚೆ ಅಧಿಕಾರಿ ಗ್ರಾಹಕರ ಹಣ ಕುರಿತು ಪರಿಶೀಲನೆ ನಡೆಸಿದಾಗ ಫೇಕ್ ಪಾಸ್ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಹಲವಾರು ವರ್ಷಗಳಿಂದ ಇದೇ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತಿದ್ದ ಚಂದ್ರು ಹಲವು ಗ್ರಾಹಕರಿಗೆ ಇದೇ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೆ ಎಂಟು ಮಂದಿ ಗ್ರಾಹಕರ ಪಾಸ್ಬುಕ್ನಲ್ಲಿ ಎಂಟ್ರಿ ಮಾಡಲಾಗಿದ್ದು ಕಂಪ್ಯೂಟರ್ ನಲ್ಲಿ ಮಾತ್ರ ನೊಂದಣಿ ಆಗಿಲ್ಲ. ಸದ್ಯ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ಮುಂದುವರಿಸಿದ್ದಾರೆ.