ಹಾಸನ: ಅಧಿಕಾರಿಗಳು ತಮ್ಮ ಮತ್ತು ಹಾಸನ ಶಾಸಕ ಪ್ರೀತಂಗೌಡರ ತಪ್ಪು ಮುಚ್ಚಿಡಲು ನಾನು ಕರೆದ ಸಭೆಗಳಿಗೆ ಗೈರಾಗುತ್ತಿದ್ದಾರೆ ಎಂದು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ಹೊರಹಾಕಿದರು.
ನಗರದ 35 ನೇ ವಾರ್ಡ್ನಲ್ಲಿ ನಡೆದ ಸಂಸದರ ಜನಸ್ಪಂದನ ಸಭೆಗೆ ಬರುವಂತೆ ಮೊದಲೇ ಮಾಹಿತಿ ನೀಡಿದ್ದರು. ಆದರೂ ಇಂದು ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಇದರಿಂದ ಕೆರಳಿದ ಸಂಸದ ಪ್ರಜ್ವಲ್, ಯಾರ್ರೀ ಅವರು ತಹಶೀಲ್ದಾರ್. ನೀವು ಯಾರ ಪ್ರಭಾವದಿಂದ ಬಂದರೂ ಇಲ್ಲಿ ನಡೆಯಲ್ಲ ಎಂದು ಗರಂ ಆದರು.
ಅಲ್ಲದೆ ಅಧಿಕಾರಿಗಳು ತಮ್ಮ ಮತ್ತು ಪ್ರೀತಂಗೌಡರ ತಪ್ಪು ಮುಚ್ಚಿಡಲು ನಾನು ಕರೆದ ಸಭೆಗಳಿಗೆ ಗೈರಾಗುತ್ತಿದ್ದಾರೆ. ನಾನು ಕತ್ತೆ ಕಾಯಲು ಬಂದಿಲ್ಲ. ಈ ರೀತಿ ಮಾಡಿದರೆ ಸರಿಯಿರಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಮೋದಿ ಸರ್ಕಾರದ ವಿರುದ್ಧವೂ ಹರಿಹಾಯ್ದ ಪ್ರಜ್ವಲ್, ಅಂದು ಮೋದಿ ಅಂದ್ರಿ. ಅವರು ವರ್ಷಕ್ಕೆ 50 ಲಕ್ಷ ಕೆಲಸ ಕೊಡುತ್ತೇವೆ ಅಂದರು. ಎಲ್ಲಿ ಕೊಟ್ರು?. ಯಾರಾದ್ರು ಒಬ್ಬ ಯುವಕ ಮೋದಿ ಹೆಸರೇಳಿ ಕೆಲಸಕ್ಕೆ ಹೋಗುತ್ತಿದ್ದಾರಾ ಎಂದು ಪ್ರಶ್ನಿಸಿದರು. ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ನಾನು ಯುವಕರಿಗೆ ಹೇಳುತ್ತಿದ್ದೇನೆ. ನಮ್ಮ ಯುವಕರಿಗೆ ಕೆಲಸ ಸಿಗುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.