ಹಾಸನ: ಪ್ರಧಾನಿ ಮೋದಿಯಷ್ಟೇ ಅಧಿಕಾರ ಕೇಂದ್ರ ಗೃಹಮಂತ್ರಿ ಅಮಿತ್ ಶಾಗೂ ಇದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಇಂದು ಹಾಸನದಲ್ಲಿ ರಾಜ್ಯ ನೆರೆ ಹಾವಳಿ ವೀಕ್ಷಣೆಗೆ ಮೋದಿ ಬರಲಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೋದಿಯಷ್ಟೇ ಅಧಿಕಾರ ಅಮಿತ್ ಶಾಗೆ ಪ್ರಧಾನಿ ಮೋದಿ ನೀಡಿದ್ದಾರೆ. ಅಮಿತ್ ಶಾ ರಾಜ್ಯಕ್ಕೆ ಬಂದು ಹೋದರೂ ಮೋದಿಯಷ್ಟೇ ಪರಿಣಾಮ ಇದೆ. ಜೊತೆಗೆ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹೀಗಾಗಿ ಯಾರೇ ಬಂದರೂ ಒಳ್ಳೆದಾಗಬೇಕು ಅನ್ನೋದು ನಮ್ಮ ಉದ್ದೇಶ ಎಂದು ತಿಳಿಸಿದರು.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅರೆಸ್ಟ್ ಆದರೆ ಪಬ್ಲಿಕ್ ಸಿಂಪತಿ ಪಡೆಯುತ್ತಾರೆ ಎಂದು ಗೊತ್ತಿತ್ತು. ತನಿಕೆಗೆ ಸಹಕರಿಸಿಲ್ಲ ಎಂದು ಇಡಿ ಬಂಧಿಸಿದ್ದಾರೆ. ಹಣದ ದಾಖಲೆ ಕೊಡಿ ಎಂದು ಕೇಳಿದ್ದಾರೆ, ಅದಕ್ಕೆ ಮಾಹಿತಿ ನೀಡಲಿ ಬಿಡಿ. ಅವರು ತನಿಖೆಗೆ ಸರಿಯಾಗಿ ವರ್ತಿಸಿಲ್ಲ ಎಂದು ಕಾಣುತ್ತದೆ. ಮೊದಲ ಬಾರಿ ಡಿಕೆಶಿ ಮನೆ ಮೇಲೆ ದಾಳಿಯಾದಾಗ ನಮ್ಮ ಬಿಜೆಪಿ ಸರ್ಕಾರವೇ ಇರಲಿಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ಕೆಎಂಎಫ್ ವಿಚಾರದಲ್ಲಿ ರೇವಣ್ಣನ ವಿರುದ್ಧ ಕಿಡಿಕಾರಿದ ಮಾಧುಸ್ವಾಮಿ, ರೇವಣ್ಣನಿಗೆ ಅಧ್ಯಕ್ಷ ಪಟ್ಟ ಬೇಡ ಎಂದರೆ ಹೆದರಿಸಿ ನಾಮಿನೇಷನ್ ಫೈಲ್ ಮಾಡಿದ್ದೇಕೆ? ಅವರನ್ನು ವಿರೋಧಿಸುವರನ್ನು ಮತ ಪಟ್ಟಿಗೆ ಸೇರಿಸದಂತೆ ಮಾಡಿದರು. ಕೆಎಂಎಫ್ ಚುನಾವಣಾ ಅಧಿಕಾರಿಯನ್ನೇ ರೇವಣ್ಣ ಹೆದರಿಸಿದ್ದರು ಎಂದು ಗಂಭೀರ ಆರೋಪ ಮಾಡಿದರು.