ಹಾಸನ: ಏಪ್ರಿಲ್ 20ರ ನಂತರ ಮಾಸ್ಕ್ ಧರಿಸದೆ ಹೊರಗೆ ಬರುವುದು ಅಪರಾಧ ಅಂತಾ ಪ್ರಧಾನಿಯವರೇ ಹೇಳಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದು ಮಾಸ್ಕ್ ಧರಿಸದೇ ಹೊರಗೆ ಬಂದರೆ ಬಂಧಿಸುವ ಎಚ್ಚರಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಹಾಸನದಲ್ಲಿ ಮಾಸ್ಕ್ ಧರಿಸದೆ ಹೊರಗೆ ಬಂದರೆ ಬಂಧಿಸುವ ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಹಾಸನದಲ್ಲಿ ಉತ್ತರಿಸಿದ ಸಚಿವರು ಹಾಸನ ಜಿಲ್ಲೆಯಲ್ಲಿ ಅಲ್ಲ. ಇಡೀ ರಾಷ್ಟ್ರದಲ್ಲೇ ಮಾಸ್ಕ್ ಧರಿಸದೇ ಆಚೆ ಬರುವುದು ಅಪರಾಧ ಎಂದು ಪ್ರಧಾನಿಯವರೇ ಹೇಳಿದ್ದಾರೆ. ಹೊರಗೆ ಬರುವವರು ಮಾಸ್ಕ್ ಹಾಕಿಕೊಂಡು ಬರಬೇಕು. ಮನೆಯಲ್ಲೇ ಮಾಸ್ಕ್ ಮಾಡಿಕೊಳ್ಳಿ ಅಥವಾ ಕರ್ಚಿಫ್, ಟವೆಲ್ನಿಂದಾದರೂ ಬಾಯಿ ಮುಚ್ಚಿಕೊಳ್ಳಬೇಕು ಎಂದು ತಿಳಿಸಿದರು.
ಹಾಸನದ ಮಹಿಳೆಯೊಬ್ಬರು ಜ್ವರದಿಂದ ಮೃತಪಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಆಕೆಗೆ ಕೊರೊನಾ ಕಾಯಿಲೆ ಇಲ್ಲ ಎಂದರು. ಇದೇ ಸಮಯದಲ್ಲಿ ಕೋಮು ಪ್ರಚೋದನೆಗೆ ಕುಮ್ಮಕ್ಕು ನೀಡಿದ್ದ ಯುವಕನನ್ನು ಬಂಧಿಸಿದ್ದಕ್ಕಾಗಿ ಎಸ್ಐ ಒಬ್ಬರನ್ನು ಒಒಡಿ ಮೇಲೆ ಬೇರೆ ಕಡೆ ಕೆಲಸಕ್ಕೆ ನಿಯೋಜಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರ ನನಗೆ ಗೊತ್ತಿಲ್ಲ. ತಿಳಿದುಕೊಂಡು ನಾನು ಮಾತನಾಡುತ್ತೇನೆ. ಯಾವುದಾದರೂ ಸಂಘ ಅಥವಾ ಕೆಲವರು ಪ್ರತಿಭಟನೆ ಮಾಡಬಹುದು ಎಂದು ಸಬ್ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿರಬಹುದು ಎಂದರು.