ಹಾಸನ: ಇಡೀ ದೇಶವೇ ಕೊರೊನಾದಿಂದ ತತ್ತರಿಸುತ್ತಿದ್ದರೆ ಇತ್ತ ಹಾಸನ ಜಿಲ್ಲೆಯ ರೈತರು ನಮಗೇ ಕುಡಿಯಲು ನೀರಿಲ್ಲದ ಸಮಯದಲ್ಲಿ ಹೇಮಾವತಿ ಅಣೆಕಟ್ಟೆಯಿಂದ ತುಮಕೂರಿಗೆ ನೀರು ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ನಮಗೂ ನೀರು ಕೊಡಿ ಎಂದು ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ.
ಸರ್ಕಾರ ಕುಡಿಯುವ ನೀರಿನ ನೆಪದಲ್ಲಿ ಹೇಮಾವತಿ ಅಣೆಕಟ್ಟೆಯಿಂದ ತುಮಕೂರಿಗೆ ನೀರು ಬಿಡಲು ಹೊರಟಿದೆ. ಆದರೆ ಹಾಸನ ಜಿಲ್ಲೆಯಲ್ಲೂ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದು, ಈ ಬಗ್ಗೆ ಮಾತ್ರ ಯೋಚನೆ ಮಾಡುತ್ತಿಲ್ಲ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಮಾಧುಸ್ವಾಮಿ ತುಮಕೂರಿಗೆ ನೀರು ಬಿಡಲು ಹೊರಟಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ತುಮಕೂರಿಗೆ ನೀರು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಈ ವೇಳೆ ಹಾಸನ ಜಿಲ್ಲೆಯ ಜನರಿಗೂ ನೀರು ಕೊಡಬೇಕು ಎಂದು ಹಾಸನದ ಕಾರ್ಲೆ ಗ್ರಾಮದಲ್ಲಿ ಹೇಮಾವತಿ ಎಡದಂಡೆ ನಾಲೆ ಪಕ್ಕ ನಿಂತು ಆಕ್ರೋಶ ಹೊರಹಾಕಿದ್ದಾರೆ. ಈಗ ಕೊರೊನಾ ಸಮಯ ಮನೆಯಿಂದ ಅನಾವಶ್ಯಕವಾಗಿ ಹೊರ ಬರಬಾರದು. ಆದರೆ ನಮಗೆ ಕೊರೊನಾಗಿಂತ ನೀರೇ ಮುಖ್ಯವಾಗಿದ್ದು, ಹೀಗಾಗಿ ಅನಿವಾರ್ಯವಾಗಿ ಬೀದಿಗಿಳಿಯಬೇಕಾಗಿದೆ ಎಂದು ರೈತರು ಮತ್ತು ಜೆಡಿಎಸ್ ಮುಖಂಡರು ಕಿಡಿಕಾರಿದರು.