– ಕುಮಾರಸ್ವಾಮಿ ಧರ್ಮರಾಯ
ಹಾಸನ: ದೇವೇಗೌಡರು ಮತ್ತು ಕುಮಾರಸ್ವಾಮಿ ಅವರದು ಹಿತ್ತಾಳೆ ಕಿವಿ ಎಂದಿದ್ದ ಮಾಜಿ ಎಂಪಿ ಶಿವರಾಮೇಗೌಡರನ್ನು ಮಾಜಿ ಸಚಿವ ಹೆಚ್ಡಿ ರೇವಣ್ಣ ಕಸದಬುಟ್ಟಿಗೆ ಹೋಲಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಸದಬುಟ್ಟಿಯಲ್ಲಿ ಇದ್ದವರನ್ನು ತೆಗೆದುಕೊಂಡು ಗೆಲ್ಲಿಸುತ್ತಾರೆ. ಶಿವರಾಮೇಗೌಡ ಅವರಂಥವರನ್ನು ಬೆಳೆಸುತ್ತಾರೆ. ಇದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ದೌರ್ಭಾಗ್ಯ ಎಂದು ಹೇಳಿದರು.
ಕುಮಾರಸ್ವಾಮಿ ಧರ್ಮರಾಯ ಇದ್ದ ಹಾಗೇ ಕೆಲವರು ಹೇಳಿದರೆ ಅದಕ್ಕೆ ಓಕೆ ಎನ್ನುತ್ತಾರೆ. ಅದಕ್ಕೆ ಈ ರೀತಿ ಆಗುತ್ತದೆ. ಬ್ಯಾಕ್ ಗ್ರೌಂಡ್ ನೋಡಿ, ನಂತರ ಪಕ್ಷದಲ್ಲಿ ಅವಕಾಶ ಕೊಡಬೇಕು. ಆದರೆ ಅದು ಯಾವುದನ್ನು ಮಾಡದೇ ಹೋದರೆ ಮುಂದೆ ಹೀಗಾಗುತ್ತೆ ಎಂದು ಶಿವರಾಮೇಗೌಡರ ವಿರುದ್ಧ ಕಿಡಿಕಾರಿದರು. ಇದನ್ನು ಓದಿ: ಹೆಚ್ಡಿಕೆ, ಹೆಚ್ಡಿಡಿ ದೇಹ ಬಂಗಾರ, ಕಿವಿ ಮಾತ್ರ ಹಿತ್ತಾಳೆ: ಶಿವರಾಮೇಗೌಡ
ಒದೇ ವೇಳೆ ಹಾಸನವನ್ನು ರೇವಣ್ಣಗೆ ಬರೆದುಕೊಟ್ಟಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನಗೆ ನನ್ನ ಜಿಲ್ಲೆಯ ಅಭಿವೃದ್ಧಿ ಆಗಬೇಕು ಅಷ್ಟೇ. ಅದನ್ನು ಬಿಟ್ಟರೆ ಹಾಸನ ನನ್ನ ಸಾಮ್ರಾಜ್ಯ ನಾನು ಮಹಾರಾಜ ಎಂದು ಎಲ್ಲೂ ಹೇಳಿಲ್ಲ ಎಂದು ಟಾಂಗ್ ಕೊಟ್ಟರು.
ಉಪಚುನಾವಣೆ ನಡೆಯುವುದರ ಬಗ್ಗೆ ಕೇಳಿದಾಗ, ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ನಾಯಕರು ಈಗಾಗಲೇ ಹೇಳಿದ್ದಾರೆ. ಈ ವಿಚಾರವಾಗಿ ಪಕ್ಷದ ವರಿಷ್ಠರಾದ ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಈ ವೇಳೆ ಜಿಟಿ ದೇವೇಗೌಡರ ಬಗ್ಗೆ ಕೇಳಿದಾಗ ಅವರು ದೊಡ್ಡವರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.