ಹಾಸನ: ಶಾಲಾ ಕಟ್ಟಡದ ಬೃಹತ್ ಗಾತ್ರದ ಗೋಡೆ ಕುಸಿದು ಭಾರೀ ಅನಾಹುತವೊಂದು ತಪ್ಪಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೆನ್ನೇನಹಳ್ಳಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ವಿದ್ಯಾರ್ಥಿಗಳು ಪ್ರಾರ್ಥನೆಗೆ ಸೇರಿದ ಸಮಯದಲ್ಲಿ ಶಿಥಿಲವಾದ ಕಟ್ಟಡದ ಹತ್ತು ಅಡಿಗಿಂತಲೂ ಉದ್ದದ ಬೃಹತ್ ಗೋಡೆ ನೋಡನೋಡುತಿದ್ದಂತೆ ಕುಸಿದು ಬಿದ್ದಿದೆ. ಬೆಳಗ್ಗೆ ಸರಿಯಾಗಿ ಶಾಲಾ ಪ್ರಾರ್ಥನೆ ನಡೆಸುವ ಸಂದರ್ಭದಲ್ಲಿ ಗೋಡೆ ಕುಸಿದಿರುವುದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.
ಸದ್ಯ ವಿದ್ಯಾರ್ಥಿಗಳು ಇನ್ನೂ ಕಟ್ಟಡದ ಒಳಕ್ಕೆ ಹೋಗಿರದ ಕಾರಣ ಅನಾಹುತವೊಂದು ತಪ್ಪಿದಂತಾಗಿದೆ. ಶಿಥಿಲಗೊಂಡಿರುವ ಕೊಠಡಿಯಲ್ಲೇ ವಿದ್ಯಾರ್ಥಿಗಳು ಅನಿವಾರ್ಯ ವಾಗಿ ಪಾಠ ಕೇಳುವ ಪರಿಸ್ಥಿತಿ ಇದೆ. ಈ ಹಿಂದೆ ಹಿರಿಯ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಹಲವು ಬಾರಿ ವಿಷಯ ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಇದಾಗಿದ್ದು ಒಟ್ಟು ಇಪ್ಪತ್ತೈದು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನೂತನ ಕಟ್ಟಡ ಮಾಡಿಕೊಡುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.