ಹಾಸನ: ನಕಲಿ ದಾಖಲಿ ಸೃಷ್ಟಿಸಿ ಬೇರೆಯವರ ಹೆಸರಿಗೆ ಜಮೀನು ಖಾತೆ ಮಾಡಿರುವ ಆರೋಪದಿಂದ ಮನನೊಂದ ರೈತ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ, ನೆಟ್ಟೆಕೆರೆ ಗ್ರಾಮದ ಚನ್ನೇಗೌಡ (60) ಮೃತ ರೈತ. ಹಲವಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಚನ್ನೇಗೌಡ ಉಳುಮೆ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಮೂರು ಎಕರೆ ಜಮೀನು ಮಂಜೂರು ಮಾಡುವಂತೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಲಂಚ ಪಡೆದ ಅಧಿಕಾರಿಗಳು ಬೆಳ್ಳಿಯಪ್ಪ ಎಂಬವರ ಹೆಸರಿಗೆ ಭೂಮಿ ಖಾತೆ ಮಾಡಿದ್ದರು. ಮೂರು ತಿಂಗಳ ಹಿಂದೆ ಪಹಣಿ ನೋಡಿದಾಗ ಬೆಳ್ಳಿಯಪ್ಪ ಅವರ ಹೆಸರಿಗೆ ಖಾತೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರ ವಿರುದ್ಧ ಎಸಿ ಕೋರ್ಟ್ ಚನ್ನೇಗೌಡ ಮೊರೆ ಹೋಗಿದ್ದರು. ಆದರೂ ನ್ಯಾಯ ದೊರಕದ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್
ಚನ್ನೇಗೌಡ ಕುಟುಂಬ ಮೂರು ಎಕರೆ ಭೂಮಿಯನ್ನೇ ನಂಬಿ ಜೀವನ ನಡೆಸಿಕೊಂಡು ಬಂದಿದ್ದರು. ಈ ಜಮೀನು ಕೈತಪ್ಪಿ ಹೋದರೆ ಬೀದಿಗೆ ಬೀಳುತ್ತೇವೆ ಎಂಬ ಆತಂಕದಿಂದ ಅವರು ವಿಷ ಸೇವಿಸಿದ್ದಾರೆ. ಘಟನೆ ಕುರಿತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ