ಹಾಸನ: ನಕಲಿ ಕೀ ಬಳಸಿ ಸಿಮೆಂಟ್ ಗೋದಾಮಿನಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಹಾಸನ ನಗರದ ದಾಸರಕೊಪ್ಪಲಿನಲ್ಲಿರುವ ಲೊಕೇಶ್ ಎಂಬವರ ಸಿಮೆಂಟ್ ಗೋದಾಮಿನಲ್ಲಿ ಕಳ್ಳತನ ಎಸಗಿದ್ದರು.
ಯಶವಂತ್, ವಿನಾಯಕ, ಯೋಗೇಶ್ ಮತ್ತು ಹೇಮಂತ್ ಬಂಧಿತರು. ಈ ನಾಲ್ವರು ಕಳೆದ 15 ದಿನಗಳಿಂದ ಪ್ರತಿದಿನ ಸಿಮೆಂಟ್ ಮೂಟೆಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು. ಗೋದಾಮಿನಲ್ಲಿಯ ಸಿಸಿ ಕ್ಯಾಮೆರಾ ಮೇಲೆ ಬಟ್ಟೆ ಮುಚ್ಚಿ ತಮ್ಮ ಕೃತ್ಯ ಎಸಗುತ್ತಿದ್ದರು ಎಂದು ತಿಳಿದು ಬಂದಿದೆ. ರಾತ್ರಿ ಕಳ್ಳತನ ಮಾಡಲು ಮುಂದಾದಾಗ ಗೋದಾಮ ಮಾಲೀಕರು ನಾಲ್ವರನ್ನು ಸೆರೆ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಂಧಿತ ನಾಲ್ವರಲ್ಲಿ ಇಬ್ಬರು ನಗರದ ಪ್ರತಿಷ್ಠಿತ ಇಂಜಿನೀಯರಿಂದ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮೋಜು ಮಸ್ತಿಗಾಗಿ ಸಿಮೆಂಟ್ ಗೋಡೌನ್ ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನೊಂದಿಗೆ ಕಳ್ಳತನಕ್ಕೆ ಇಳಿದಿದ್ದರು. ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.