ಹಾಸನ: ಬುದ್ಧಿವಂತ ಪ್ರಾಣಿ ಎಂದು ಕರೆಸಿಕೊಳ್ಳುವ ಆನೆ ತನ್ನ ಸಂಚಾರಕ್ಕೆ ಅಡ್ಡಿಯಾಗಿದ್ದ ವಿದ್ಯುತ್ ಬೇಲಿಯನ್ನು ದಾಟಲು ಮರವನ್ನು ಉರುಳಿಸಲು ವಿಫಲ ಯತ್ನ ನಡೆಸಿದ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ.
ಗುರುವಾರ ಮುಂಜಾನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಕೋಗರವಳ್ಳಿ ಗ್ರಾಮದ ಸಂತೋಷ ಎಂಬುವವರ ತೋಟಕ್ಕೆ ನುಗ್ಗಿದ ಆನೆ, ಅಲ್ಲಿಂದ ಮುಂದೆ ಹೊರಟಿದೆ. ಆದರೆ ತೋಟದಿಂದ ಹೊರಬರಲು ಸೋಲಾರ್ ವಿದ್ಯುತ್ ಬೇಲಿ ಅಡ್ಡಿಯಾಗಿತ್ತು.
ಆಗ ಕಾಡಾನೆ ಬೇಲಿ ದಾಟಲು, ವಿದ್ಯುತ್ ಬೇಲಿಯ ಸಮೀಪವೇ ಇದ್ದ ಮರವನ್ನು ಉರುಳಿಸಲು ಪ್ರಯತ್ನಿಸಿತ್ತು. ಈ ಮರಕ್ಕೆ ವಿದ್ಯುತ್ ಪ್ರವಹಿಸಿದ್ದರಿಂದ ಮರ ಬೀಳಿಸುವ ತನ್ನ ಪ್ರಯತ್ನ ಕೈ ಬಿಟ್ಟು ತೋಟದ ಮತ್ತೊಂದೇಡೆ ಇದ್ದ ಗೇಟನ್ನು ದ್ವಂಸಗೊಳಿಸಿ ಹೊರ ಬಂದಿದೆ. ಆನೆ ಮರ ಉರುಳಿಸಲು ಯತ್ನಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.