ಹಾಸನ: ಇಂದಿನಿಂದ ಹಾಸನಾಂಬೆಯ ದರ್ಶನ ಸಾರ್ವಜನಿಕರಿಗೆ ಸಿಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರ ಆಗಮಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಜಿಲ್ಲಾಡಳಿತದ ಅತಿಯಾದ ಭದ್ರತೆಯ ಕಿರಿಕಿರಿಗೆ ಬೇಸತ್ತ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಮಿಸಿರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.
ಶೌಚಾಲಯದ ಅವ್ಯವಸ್ಥೆಯಿಂದ ಭಕ್ತರು ಕಂಗೆಟ್ಟಿದ್ದಾರೆ. ಭಕ್ತರ ಸೌಲಭ್ಯಕ್ಕಾಗಿ ನಿರ್ಮಿಸಿರುವ ಶೌಚಾಲಯಗಳಲ್ಲಿ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುರುಷ ಪೊಲೀಸ್ ಸಿಬ್ಬಂದಿ ಮಹಿಳಾ ಶೌಚಾಲಯವನ್ನು ಬಳಸುತ್ತಿದ್ದು, ಕೆಲ ಪೊಲೀಸರು ಶೌಚಾಲಯದ ಹೊರಗಡೆಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಹೆಚ್ಚಿನ ಭಕ್ತರ ಆಗಮನದ ನಿರೀಕ್ಷೆ ಇದ್ದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಜಿಲ್ಲಾಡಳಿತ ಮೂಲಭೂತ ಸೌಲಭ್ಯ ನೀಡುವಲ್ಲಿ ವಿಫಲವಾಗಿರುವ ಕಾರಣ ಭಕ್ತರು ಕಿಡಿಕಾರಿದ್ದಾರೆ.
ಇಂದಿನಿಂದ ದರ್ಶನ:
ವರ್ಷಕೊಮ್ಮೆ ಬಾಗಿಲು ತೆಗೆಯುವ ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ಎರಡನೇ ದಿನ. ಆಶ್ವೀಜ ಮಾಸದ ಮೊದಲ ಗುರುವಾರ ಬಾಗಿಲು ತೆಗೆಯಲಾಗಿದ್ದು, ಇಂದು ಮೊದಲ ಶುಕ್ರವಾರ. ರಜೆಗಳು ಮುಗಿದ ಹಿನ್ನಲೆ ಅಥವಾ ಮತ್ತೇನು ಕಾರಣವೋ ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಕೊಂಚವಿರಳವಾಗಿದೆ ಎಂಬ ಮಾಹಿತಿ ಲಭಿಸಿದೆ.
ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆಯುವ ಹಾಸನಾಂಬ ದೇವಾಲಯದಲ್ಲಿ ಹಣ ಇದ್ದವರಿಗೆ ಮಾತ್ರ ಹಾಸನಾಂಬೆ ದರ್ಶನವಾಗಿದೆ. ಹಾಸನದ ಹಾಸನಾಂಬೆ ದೇವಾಲಯದಲ್ಲಿ ತಲಾ ಒಂದುಸಾವಿರ ಟಿಕೆಟ್ ಮಾಡಿರುವ ಹಾಸನ ಜಿಲ್ಲಾಡಳಿತದ ಕ್ರಮದಿಂದಾಗಿ ಭಕ್ತರ ಸಂಖ್ಯೆ ಗಣನೀಯವಾಗಿ ಸಂಪೂರ್ಣ ಕಡಿಮೆಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ಪ್ರತೀ ದಿನ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಕೇವಲ ಸಾವಿರಾರು ಸಂಖ್ಯೆಗೆ ಭಕ್ತರ ಸಂಖ್ಯೆ ಇಳಿಮುಖವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv