ಹಾಸನ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಆದರೂ ಕೆಲವರು ಮನೆಯಿಂದ ಹೊರಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ರೋಡಿಗಿಳಿದ ವಾಹನವನ್ನೇ ಸೀಜ್ ಮಾಡುತ್ತಿದ್ದಾರೆ. ಇತ್ತ ಎಣ್ಣೆ ಮಾರಿದ್ರೆ 500 ರೂ. ದಂಡ ವಿಧಿಸಲಾಗುವುದು ಎಂದು ಗ್ರಾಮಸ್ಥರು ಡಂಗೂರ ಸಾರುತ್ತಿದ್ದಾರೆ.
ಹೌದು. ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದವರ ವಾಹನವನ್ನು ಒಂದು ಕಡೆ ಪೊಲೀಸರು ಸೀಜ್ ಮಾಡಿದ್ದರೆ, ಮತ್ತೊಂದೆಡೆ ರಸ್ತೆಯಲ್ಲಿ ತಿರುಗುತ್ತಿದ್ದ ಯುವಕರಿಗೆ ಬಸ್ಕಿ ಹೊಡೆಸಿ ಮನೆಯಿಂದ ಹೊರ ಬರದಂತೆ ಬುದ್ಧಿ ಹೇಳಿದ್ದಾರೆ.
ಹಾಸನ ನಗರದಲ್ಲಿ ಇಂದು 8 ಗಂಟೆವರೆಗೆ ಮಾತ್ರ ಹಾಲು ಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೂ ಕೆಲವರು ತಮ್ಮ ವಾಹನಗಳಲ್ಲಿ ಓಡಾಡುತ್ತಿದ್ದರು. ಅಂತಹವರ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈ ವೇಳೆ ಕೆಲವರು ವೈದ್ಯಕೀಯ ಕಾರಣ ನೀಡಿ ತಿರುಗಾಡುತ್ತಿರುವುದಾಗಿ ಹೇಳಿದ್ರು. ಅದಕ್ಕೆ ಪೊಲೀಸರು ಅಗತ್ಯ ದಾಖಲೆ ಒದಗಿಸಿ ವಾಹನ ಬಿಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ.
ಸಕಲೇಶಪುರ ತಾಲೂಕಿನ ಹೊಂಕರವಳ್ಳಿ ವೃತ್ತದಲ್ಲಿ ಸುತ್ತಾಡುತ್ತಿದ್ದ ಯುವಕರಿಗೆ ಬಸ್ಕಿ ಹೊಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಮತ್ತೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಿ ಕಳುಹಿಸಿದ್ದಾರೆ.
ಎಣ್ಣೆ ಮಾರಿದ್ರೆ 500 ರೂ. ದಂಡ:
ಕೊರೊನಾ ಕಫ್ರ್ಯೂ ನಡುವೆಯೂ ಕದ್ದು ಎಣ್ಣೆ ಮಾರುತ್ತಿದ್ದವರಿಗೆ ಎಚ್ಚರಿಕೆ ನೀಡುವ ಸಲುವಾಗಿ ಎಣ್ಣೆ ಮಾರಿದ್ರೆ 500 ರೂ. ದಂಡ ಎಂದು ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು, ದಂಡಿಗನಹಳ್ಳಿ ಹೋಬಳಿ, ತೆಂಕನಹಳ್ಳಿ ಗ್ರಾಮದಲ್ಲಿ ಕದ್ದು ಎಣ್ಣೆ ಮಾರುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದಲ್ಲಿ ಡಂಗೂರ ಸಾರಿಸಿದ ಗ್ರಾಮಸ್ಥರು, ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಾವು ನೇರವಾಗಿ ಎಣ್ಣೆ ಮಾರುವ ವ್ಯಕ್ತಿಯ ಮನೆಗೆ ನುಗ್ಗಲು ಆಗಲ್ಲ. ಹಾಗೇ ಮಾಡಿದ್ರೆ ಗ್ರಾಮದಲ್ಲಿ ಗಲಾಟೆ ಆಗುತ್ತೆ. ಆದ್ದರಿಂದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಆಗ್ರಹಿಸಿದ್ದಾರೆ.