ಹಾಸನ: ನಾನು ಕೂಡ ಭವಿಷ್ಯ ಹೇಳುತ್ತೇನೆ. ಮುಂದಿನ 15 ವರ್ಷದ ಬಿಜೆಪಿ ಸರ್ಕಾರವೇ ಇರುತ್ತದೆ ಎಂದು ಹೇಳುವ ಮೂಲಕ ಕೋಡಿ ಶ್ರೀಗಳಿಗೆ ಶಾಸಕ ಪ್ರೀತಂ ಗೌಡ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭವಿಷ್ಯ ನುಡಿದಿದ್ದು ನಿಜವಾಗಿದೆ. ನಾನು ಗೆಲ್ತೀನಿ, ನಮ್ಮ ಸರ್ಕಾರ ಬರುತ್ತೆ ಎಂದಿದ್ದೆ. ಎಲ್ಲಾ ನಿಜವಾಗಿದೆ. ಮುಂದೆಯೂ ನಮ್ಮ ಸರ್ಕಾರ ಬರುತ್ತದೆ ಎಂದು ಹೇಳುತ್ತಿದ್ದೇನೆ. ಈಗ ಸರ್ಕಾರ ಪತನದ ಭವಿಷ್ಯ ಹೇಳಿರೋ ಸ್ವಾಮೀಜಿ ಹಿಂದಿನ ವಿಚಾರಗಳನ್ನ ನೋಡಿ. ಅವರದ್ದು ಗಾಳಿ ಬಂದಕಡೆ ತೂರಿಕೊಳ್ಳುವ ಗುಣವಾಗಿದೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಕಿಡಿ ಕಾರಿದರು.
ರಾಜ್ಯದ ವಿಚಾರದಲ್ಲಿ ಮೀಡಿಯಾ ಅಟ್ರಾಕ್ಷನ್ ಗೆ ಬಾಯಿಗೆ ಬಂದಹಾಗೆ ಮಾತಾಡೋದು ಬೇಡ. ಅವರು ಹಿರಿಯರು ಪಾದಕ್ಕೆ ನಮಸ್ಕಾರ ಮಾಡಿ ಹೇಳುತ್ತೇನೆ. ನೀವು ರಾಜಕಾರಣದ ಬಗ್ಗೆ ಸ್ವಲ್ಪ ದಿನ ಭವಿಷ್ಯ ಹೇಳೋದನ್ನ ಕಡಿಮೆ ಮಾಡಿದರೆ ಸಾರ್ವಜನಿಕ ಹಿತದಿಂದ ಒಳ್ಳೆಯದು ಎಂದು ಅಸಮಧಾನ ಹೊರ ಹಾಕಿದರು.
ಇತ್ತ ಮಧ್ಯಂತರ ಚುನಾವಣೆಗೆ ತಯಾರಾಗಿ ಎಂದಿದ್ದ ಸಿದ್ದರಾಮಯ್ಯ ಅವರಿಗೂ ತಿರುಗೇಟು ನೀಡಿದ ಪ್ರೀತಂಗೌಡ, ತಿಂಗಳು ಲೆಕ್ಕದಲ್ಲಾದರೆ 48 ರಿಂದ 50 ತಿಂಗಳಲ್ಲಿ ಚುನಾವಣೆ ಬರುತ್ತದೆ. ವರ್ಷದ ಲೆಕ್ಕದಲ್ಲಿ ನಾಲ್ಕು ವರ್ಷ ಕಳೆದ ಬಳಿಕ ಚುನಾವಣೆ ಬರುತ್ತದೆ. ಸಿದ್ದರಾಮಯ್ಯ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಹಾಗೆ ಹೇಳಿರಬೇಕು ಎಂದು ಟಾಂಗ್ ನಿಡಿದರು.
ನಾವೇನು ಐವತ್ತು ವರ್ಷ ಅಧಿಕಾರಕ್ಕೆ ಅಂಟಿಕೊಂಡು ಕೂತಿರಲ್ಲ. 2023ಕ್ಕೆ ಚುನಾವಣೆ ಬರುತ್ತದೆ ಬಿಜೆಪಿ ಒಳ್ಳೆಯ ಕೆಲಸ ಮಾಡಿದರೆ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.