ಹಾಸನ: ನವೆಂಬರ್ 1 ರಿಂದ 9 ರ ವರೆಗೆ ನಡೆದ ಹಾಸನಾಂಭೆ ದರ್ಶನೋತ್ಸವದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ಈ ಬಾರಿ 2.64 ಕೋಟಿ ರೂ. ನೀಡಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ದೇವಾಲಯದ ಆದಾಯಕ್ಕೆ ಒಂದೂವರೆ ಕೋಟಿ ರೂ. ಕಡಿಮೆ ಆಗಿದೆ.
ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಭೆಗೆ ಪ್ರತಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಆದಾಯ ಹರಿದು ಬರುತ್ತಿತ್ತು. ಅಲ್ಲದೇ ವರ್ಷದಿಂದ ವರ್ಷಕ್ಕೆ ದೇವಾಲಯದ ಆದಾಯ ಪ್ರಮಾಣ ಏರಿಕೆಯಾಗುತ್ತಲೇ ಇತ್ತು. ಇದಕ್ಕೆ ಪುಷ್ಟಿ ಎಂಬಂತೆ 2013 ರಲ್ಲಿ 1,21 ಕೋಟಿ ರೂ., 2014 ರಲ್ಲಿ 1,27 ಕೋಟಿ ರೂ, 2015 ರಲ್ಲಿ 1.46 ಕೋಟಿ ರೂ, 2016 ರಲ್ಲಿ 2.67 ಕೋಟಿ ರೂ. ಮತ್ತು 2017 ರಲ್ಲಿ 4.14 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.
- Advertisement 2
- Advertisement 3
ಈ ಬಾರಿ ಕಾಣಿಕೆ ರೂಪದ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಒಂದೂವರೆ ಕೋಟಿ ರೂ. ಕಡಿಮೆ ಆಗಿದೆ. ನವೆಂಬರ್ 1 ರಿಂದ 9 ರವರೆಗೆ ನಡೆದ ದರ್ಶನ ಅವಧಿಯಲ್ಲಿ ಹರಕೆಯ ಕಾಣಿಕೆ, ಟಿಕೆಟ್, ಲಾಡು ಮತ್ತು ಸೀರೆ ಮಾರಾಟದಿಂದ ಒಟ್ಟು 2,64,14,911 ರೂ. ಹಣ ಸಂಗ್ರಹವಾಗಿದೆ. ಈ ಪೈಕಿ 1 ಸಾವಿರ ರೂ. ಬೆಲೆಯ ಟಿಕೆಟ್ ಮಾರಾಟದಿಂದ 90.87.400 ಲಕ್ಷ ರೂ., 300 ರೂ. ಟಿಕೆಟ್ ಮಾರಾಟದಿಂದ 53,78,400 ರೂ., ಲಾಡು ಪ್ರಸಾದ ಮಾರಾಟದಿಂದ 13,39,440 ರೂ. ಮತ್ತು ಸೀರೆ ಮಾರಾಟದಿಂದ 56,200 ರೂ. ಸಂಗ್ರಹವಾಗಿದೆ.
- Advertisement 4
ದೇವಾಲದಯ ಆದಾಯ ಕಡಿಮೆ ಆಗಲು ಜಿಲ್ಲಾಡಳಿತದ ಬೇಜವಾಬ್ದಾರಿ ನಡೆ ಕಾರಣ ಎಂದು ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ಆರೋಪಿಸಿದ್ದಾರೆ. ಕಳೆದ ಆರೇಳು ವರ್ಷಗಳಿಂದ ದೇವಾಲಯ ಖಾತೆಗೆ ವಿವಿಧ ಮೂಲಗಳಿಂದ ಕೋಟಿ ಕೋಟಿ ರೂ. ಆದಾಯ ಬರುತ್ತಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ದೇಗುಲ ಪ್ರಾಂಗಣ ಅಭಿವೃದ್ಧಿಯಾಗಿಲ್ಲ. ಇದಕ್ಕೆ ಒತ್ತು ನೀಡುವುದರ ಜೊತೆಗೆ ವರ್ಷ ವರ್ಷ ಬರುವ ಭಕ್ತರಿಗೆ ಬೇಕಾದ ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕಿತ್ತು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಅವರು, ಜನಪ್ರತಿನಿಧಿಯಾದ ನನ್ನನ್ನೇ ಹಾಸನಾಂಭೆ ಉತ್ಸವದ ಸಭೆಗೆ ಆಹ್ವಾನಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹಾಸನಾಂಭೆ ಮಹಿಮೆ, ವಿಶೇಷತೆ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ನೀಡಿದ್ದ ಮಾಧ್ಯಮಗಳನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಈ ರೀತಿಯ ಹಲವು ಗೊಂದಲಗಳಿಂದಾಗಿ ಭಕ್ತರ ಸಂಖ್ಯೆ ಕಡಿಮೆಯಾಗಿ, ಆದಾಯವೂ ಕುಗ್ಗಿದೆ. ಮುಂದೆ ಹೀಗಾಗದಂತೆ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ.
ಅಪಾರ ಪ್ರಮಾಣದಲ್ಲಿ ಹಾಸನಾಂಭ ದೇವಾಲಯಕ್ಕೆ ಭಕ್ತರು ಹಣ ನೀಡಿದ್ದರು, ದೇವಾಲಯ ಹಾಗೂ ಸುತ್ತಮುತ್ತಲಿನ ವಾತಾವರಣದ ಅಂದ ಹೆಚ್ಚಿಸಲು ಬಳಕೆಯಾಗುತ್ತಿಲ್ಲ. ಹಾಸನಾಂಭೆ ದೇಗುಲ ನಗರದ ಹೃದಯ ಭಾಗದಲ್ಲಿದ್ದು, ಆದರೆ ದೇವಾಲಯದ ಸುತ್ತಮುತ್ತ ಇರುವ ಹಳೆಯ ಕಾಲದ ಮನೆಗಳನ್ನು ತೆರವು ಗೊಳಿಸಿ ವಿಶಾಲಗೊಳಿಸಬೇಕು ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ. ಅಲ್ಲದೇ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಶಾಶ್ವತ ಕುಡಿಯುವ ನೀರು, ಶೌಚಾಲಯ ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆಗೆ ಒತ್ತು ನೀಡಬೇಕು ಎಂಬ ಒತ್ತಡ ಕೇಳಿ ಬಂದಿತ್ತು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ. ಈ ಬಾರಿಯ ಕಾಣಿಕೆ ಹಣವೂ ಸೇರಿ ದೇವಾಲಯ ಖಾತೆಯಲ್ಲಿ ಬರೋಬ್ಬರಿ 10 ಕೋಟಿ ಹಣವಿದ್ದು, ಅದನ್ನು ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews