ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ಮೂವರನ್ನು ಹರ್ಯಾಣದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶದ ಮುಜಾಫರ್ ನಗರದ ಮಹತಾಬ್(28), ರಾಗಿಬ್ (34) ಹಾಗೂ ಶಾಮ್ಲಿಯ ಖಾಲಿದ್(25) ಎಂದು ಗುರುತಿಸಲಾಗಿದೆ. ಹಿಸಾರ್ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹಿಸಾರ್ ಕಂಟೋನ್ಮೆಂಟ್ನಲ್ಲಿ ಮೂವರು ಕಟ್ಟಡ ಕೆಲಸ ಮಾಡುತ್ತಿದ್ದರು. ಅವರ ಚಲವಲನದ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಮೂವರನ್ನು ಆಗಸ್ಟ್ 1ರಂದು ಬಂಧಿಸಿದ್ದರು. ಬಳಿಕ ಅವರ ಬಳಿ ಇದ್ದ ಮೊಬೈಲ್ ವಶಕ್ಕೆ ಪಡೆದಾಗ ಭಾರತೀಯ ಸೇನೆಯ ಶಿಬಿರದ ಫೋಟೋ ಮತ್ತು ವಿಡಿಯೋಗಳು ಪತ್ತೆಯಾಗಿದ್ದವು ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಆರೋಪಿಗಳು ಭಾರತೀಯ ಸೇನೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು. ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ಕೆಲಸ ಮಾಡುತ್ತಿದ್ದ ಬಂಧಿತರು, ಪಾಕ್ ಏಜೆಂಟರನ್ನು ವಾಟ್ಸಪ್ ವಾಯ್ಸ್ ಮತ್ತು ವಿಡಿಯೋ ಕರೆ ಮೂಲಕ ಸಂಪರ್ಕಿಸುತ್ತಿದ್ದರು ಎಂದು ವರದಿಯಾಗಿದೆ.