ನವದೆಹಲಿ: ಲೋಕಸಭೆ ಚುನಾವಣೆ ಬಳಿಕ ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ಆಪ್ (AAP) ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. 90 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್ ನಾಯಕರು (Congress Leaders) ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿ ಅಂತಿಮ ಮಾತುಕತೆ ನಡೆಯುವ ಸಾಧ್ಯತೆಗಳಿವೆ.
ಲೋಕಸಭೆ ಚುನಾವಣೆ ವೇಳೆ ಹರಿಯಾಣದಲ್ಲಿ (Haryana Polls) ಆಪ್, ಕಾಂಗ್ರೆಸ್ ಮೈತ್ರಿಗೆ ಗೆಲುವು ಸಿಗದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಮತ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯೂ ಮತ ವಿಭಜನೆ ತಡೆಯಲು ಮೈತ್ರಿ ಮಾತುಕತೆ ನಡೆಯುತ್ತಿದೆ, ಎರಡು ಪಕ್ಷದಲ್ಲಿ ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಚಾರಗಳಿವೆ. ಹರಿಯಾಣದಲ್ಲಿ ಮೂರನೇ ಬಾರಿಗೆ ಬಿಜೆಪಿಗೆ ಅಧಿಕಾರ ನೀಡದೇ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ನಿರ್ಧರಿಸಿದ್ದು ಇದಕ್ಕಾಗಿ ಸಾಕಷ್ಟು ತಯಾರಿ ಮಾಡುತ್ತಿದೆ. ಇದನ್ನೂ ಓದಿ: ʻಕೈʼ ಹಿಡಿಯುತ್ತಾರಾ ಕುಸ್ತಿಪಟು ವಿನೇಶ್, ಬಜರಂಗ್ ಪುನಿಯಾ – ತೀವ್ರ ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ಭೇಟಿ
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ಉಭಯ ಪಕ್ಷಗಳ ನಡುವಿನ ಈ ಮಾತುಕತೆಯನ್ನು ಅದರ ನಾಯಕರಾದ ಕೆ.ಸಿ ವೇಣುಗೋಪಾಲ್ (KC Venugopal) ಮತ್ತು ದೀಪಕ್ ಬಬಾರಿಯಾ ನಡೆಸಲಿದ್ದಾರೆ. ಆಪ್ ಕಡೆಯುಂದ ಸಂದೀಪ್ ಪಾಠಕ್ ಮತ್ತು ರಾಘವ್ ಚೆಡ್ಡಾ ಮೈತ್ರಿ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್
ಎರಡು ದಿನಗಳ ಹಿಂದೆ ಹರಿಯಾಣ ಕಾಂಗ್ರೆಸ್ನ ಕೆಲವು ನಾಯಕರು ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು. ಈ ಸಭೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸುವ ಅಥವಾ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆಯೂ ಚರ್ಚಿಸಿದ್ದಾರೆ. ಪರಸ್ಪರ ಚರ್ಚೆಯ ನಂತರ ಈ ವಿಷಯದ ಬಗ್ಗೆ ಅಂತಿಮ ಅಭಿಪ್ರಾಯ ನೀಡುವಂತೆ ರಾಹುಲ್ ಗಾಂಧಿ ನಾಯಕರನ್ನು ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಎಲ್ಲ ಉನ್ನತ ನಾಯಕರ ಜತೆ ಮಾತುಕತೆ ನಡೆಸಿದ ಬಳಿಕವಷ್ಟೇ ಕೆ.ಸಿ.ವೇಣುಗೋಪಾಲ್ ಹಾಗೂ ದೀಪಕ್ ಬಬಾರಿಯಾ ಮೈತ್ರಿಗೆ ಸೂತ್ರ ರೂಪಿಸುವಂತೆ ಹೇಳಲಾಗಿದೆ.
ಮಾಹಿತಿಯ ಪ್ರಕಾರ, ಆಮ್ ಆದ್ಮಿ ಪಕ್ಷವು ಹತ್ತು ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬೇಡಿಕೆಯನ್ನು ಕಾಂಗ್ರೆಸ್ ನಾಯಕತ್ವದ ಮುಂದೆ ಇರಿಸಿದೆ. ಐದರಿಂದ ಏಳು ಸೀಟು ನೀಡಲು ಕಾಂಗ್ರೆಸ್ ಒಪ್ಪಿಗೆ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಎರಡು ಪಕ್ಷಗಳು ಸಮನ್ವಯ ಸಾಧಿಸುವ ಅನಿವಾರ್ಯತೆ ಎದುರಾಗಬಹುದು ಎನ್ನಲಾಗಿದೆ. ಇದನ್ನೂ ಓದಿ: 3,991 ಪುಟ, 231 ಸಾಕ್ಷಿ, 5 ವ್ಯಾಲ್ಯೂಂ – ದರ್ಶನ್ & ಗ್ಯಾಂಗ್ ವಿರುದ್ಧದ ಚಾರ್ಜ್ಶೀಟ್ನಲ್ಲಿ ಏನಿದೆ?