ಚಂಡೀಗಢ: ದೆಹಲಿ ಬಳಿಕ ಹರ್ಯಾಣದಲ್ಲಿ ಆಪ್ ಪಕ್ಷದ ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಭಾರೀ ಮುಖಭಂಗವಾಗಿದೆ.
ಬಹುಮತದಿಂದ ದೆಹಲಿಯಲ್ಲಿ ಸರ್ಕಾರ ರಚಿಸಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಬೇರೆ ರಾಜ್ಯಗಳಲ್ಲಿ ಪಕ್ಷದ ಅಸ್ತಿತ್ವ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ದೆಹಲಿಯ ನೆರೆಯ ರಾಜ್ಯವಾದ ಹರ್ಯಾಣದ ಚುನಾವಣೆ ಮೇಲೆ ಹೆಚ್ಚು ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಆಪ್ ಅಭ್ಯರ್ಥಿಗಳು ಬಹುತೇಕ ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದ್ದಾರೆ.
ಹರ್ಯಾಣದ 90 ಕ್ಷೇತ್ರಗಳಲ್ಲಿ 46ರಲ್ಲಿ ಆಪ್ ಸ್ಪರ್ಧೆ ಮಾಡಿತ್ತು. 46 ಕ್ಷೇತ್ರಗಳಲ್ಲಿ ಆಪ್ ಶೇ.0.48ರಷ್ಟು ಮಾತ್ರ ಮತಗಳನ್ನು ಪಡೆದುಕೊಂಡಿದೆ. ನೋಟಾಗೆ ಶೇ. 0.52 ಮತಗಳು ಬಿದ್ದಿವೆ.
ಕಾಂಗ್ರೆಸ್, ಬಿಜೆಪಿ ಮತ್ತು ಜನ್ನಾಯಕ್ ಜನತಾ ಪಾರ್ಟಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿಗಳು ಸೋಲು ಕಂಡಿದ್ದರು. ದೆಹಲಿಯಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಆಪ್ ಹರ್ಯಾಣದಲ್ಲಿ ಮತ ಕೇಳಿತ್ತು. ಅರವಿಂದ್ ಕೇಜ್ರಿವಾಲ್ ಸಹ ಸೇರಿದಂತೆ ಹೆಚ್ಚು ನಾಯಕರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಕೇವಲ ಸ್ಥಳೀಯ ನಾಯಕರು ಮಾತ್ರ ಚುನಾವಣಾ ಪ್ರಚಾರ ನಡೆಸಿದ್ದರು.