ಶಿವಮೊಗ್ಗ: ಜಿಲ್ಲೆಯ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಾಗರ ನಗರಸಭೆ ವ್ಯಾಪ್ತಿಯ ಎಸ್.ಎನ್.ನಗರದ ಕಂಬಳಿಕೊಪ್ಪದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಸತಿ ನಿಲಯದ ಸ್ವಚ್ಛತೆ, ಆಹಾರ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಸಮಸ್ಯೆಗಳು ಹಾಗೂ ಅವಶ್ಯಕತೆಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳಿಂದ ವಸತಿ ನಿಲಯದ ಹೆಣ್ಣು ಮಕ್ಕಳು ಕರೆ ಮಾಡಿ ಹಾಸ್ಟೆಲ್ನಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ಇಲ್ಲಿನ ವಿದ್ಯಾರ್ಥಿನಿಗಳಿಂದ ಮಾಹಿತಿ ಪಡೆದ ಸಂದರ್ಭದಲ್ಲಿ ನೀರಿನ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ. ನೌಕರರ ಸಮಸ್ಯೆ ಇದೆ, ಗೋಧಿ ಹಿಟ್ಟು ಸರಿಯಿಲ್ಲ, ವಿದ್ಯಾರ್ಥಿಗಳಿಗೆ ನೀಡುವ ಕಿಟ್ಗಳಲ್ಲಿ ಸರಿಯಾಗಿ ವಸ್ತುಗಳು ಬರುತ್ತಿಲ್ಲ ಎಂದು ದೂರಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನಿನ್ನೆಗಿಂತ ಇಂದು ಕೇಸ್ ಇಳಿಕೆ – ಒಟ್ಟು 27,156, ಪಾಸಿಟಿವಿಟಿ ರೇಟ್ 12.45%
ಈ ಬಗ್ಗೆ ತಕ್ಷಣ ಅಧಿಕಾರಿಗಳ ಜೊತೆ ಸಭೆ ನಡೆಸಿ ಸರಿಪಡಿಸಲಾಗುವುದು ಹಾಗೂ ಮಕ್ಕಳು ಹೇಳಿರುವ ಎಲ್ಲಾ ಸಮಸ್ಯೆಗಳನ್ನೂ ಅತಿ ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ನಗರಸಭೆ ಉಪಾಧ್ಯಕ್ಷ ವಿ. ಮಹೇಶ್, ಸ್ಥಳೀಯ ನಗರ ಸಭೆ ಸದಸ್ಯ ಲಿಂಗರಾಜು, ಸಾಗರ ಉಪವಿಭಾಗ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ವಿನೋದ್ರಾಜ್, ರವಿ ಇತರರು ಜೊತೆಗಿದ್ದರು. ಇದನ್ನೂ ಓದಿ: ಜನವರಿ 31ರ ವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ