ಚಿಕ್ಕಮಗಳೂರು: ಶಿವಮೊಗ್ಗದ ಸಿಗೇಹಟ್ಟಿಯಲ್ಲಿ ಆದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದಲ್ಲ ಎಂದು ಎನ್ಐಎ ದೃಢೀಕರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಹರ್ಷನ ಕೊಲೆ ಪ್ರಕರಣದ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಶಿವಮೊಗ್ಗಕ್ಕೆ ಆಗಮಿಸಿರುವ ಎನ್ಐಎ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಹರ್ಷನ ಕೊಲೆ ಹಿಂದೆ ಕೋಮು ದಳ್ಳುರಿಯ ಉದ್ದೇಶವಿದೆ ಎನ್ನುವ ಅಂಶ ಬಹಿರಂಗವಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹರ್ಷನ ಕೊಲೆ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ಮುಲಾಜಿಲ್ಲದೇ ಖಂಡಿಸಲು ಮುಂದಾದ ಕಾಂಗ್ರೆಸ್ ನಾಯಕರು
ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದ ಆಗಿಲ್ಲ ಎಂದು ಅಂದೇ ಮೇಲ್ನೋಟಕ್ಕೆ ಕಾಣಿಸಿತ್ತು. ಹರ್ಷನ ಕೊಲೆ ಹರ್ಷನಿಗಾಗಲಿ-ಆಪಾದಿತರಿಗಾಗಲಿ ಇದ್ದ ಹಳೇ ವೈಷಮ್ಯದಿಂದ ಅಲ್ಲ ಎಂಬುದನ್ನ ಎನ್ಐಎ ದೃಢೀಕರಿಸಿದೆ. ಈ ಕಾರಣಕ್ಕಾಗಿ ಸರ್ಕಾರ ಸಮಗ್ರ ತನಿಖೆಗೆ ಆದೇಶ ಮಾಡಿತ್ತು. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಬೇಕೆಂಬ ಸಂಚಿನಲ್ಲೇ ಹತ್ಯೆ ಮಾಡಿದ್ದು, ಇದು ಯಾರೋ ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರ ಅಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ
ನಿನ್ನೆ ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು. ಅದೇ ಕಾರಣಕ್ಕೆ ಸರ್ಕಾರ ಎನ್ಐಎ ತನಿಖೆಗೆ ಕೇಸ್ ಒಪ್ಪಿಸಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರಬರಲಿ ಎಂದಿದ್ದಾರೆ. ಈ ಕೊಲೆ ಹಿಂದೆ ವ್ಯವಸ್ಥಿತಿ ಜಾಲ ಕೆಲಸ ಮಾಡಿರುವ ಸಾಧ್ಯತೆ ಇದೆ. ಈ ಹತ್ಯೆಗೆ ಫೈನಾನ್ಸ್ ಮಾಡುವವರು ಯಾರು? ಪ್ರಚೋದನೆ ಕೊಟ್ಟವರು ಯಾರು? ಹಣದ ವ್ಯವಸ್ಥೆ ಮಾಡುವವರು ಯಾರು? ನ್ಯಾಯಾಲಯದಲ್ಲಿ ಬೆಂಬಲ ಕೊಡುವವರು ಯಾರು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.
ಈ ಹತ್ಯೆಯ ಹಿಂದೆ ಯಾವ ನೆಟ್ವರ್ಕ್ ಇದೆ ಎನ್ನುವುದನ್ನು ನೋಡಬೇಕು. ಅದು ರಾಜ್ಯದ್ದೋ ಅಥವ ಹೊರರಾಜ್ಯದ್ದೋ ಗೊತ್ತಾಗಲಿ ಎಂದು ಹೇಳಿದರು.