ಮಂಡ್ಯ: ಬಿಜೆಪಿ ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ. ಇದರಿಂದಲೇ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಗುಪ್ತಚರ ಇಲಾಖೆ ಸತ್ತೋಗಿದಿಯಾ?, ಗೃಹ ಸಚಿವರ ಜಿಲ್ಲೆಯಲ್ಲೆ ಇಂತಹ ಘಟನೆ ನಡೆದಿದೆ. ಈ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡುವುದು ಸರ್ಕಾರದ ಕೆಲಸವಾಗಿದೆ. ಆದರೆ ಕೊಲೆಯಾದ ಹರ್ಷನ ಜೀವಕ್ಕೆ ಅಪಾಯ ಇತ್ತು ಎಂದು ಅವರ ತಂದೆಯೆ ಹೇಳಿದ್ದಾರೆ. ಇದು ಗೊತ್ತಿದ್ದರು ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು. ಕಾನೂನು ಸುವ್ಯವಸ್ಥಿತ ನಿರ್ವಹಣೆ ಮಾಡಲು ಸಾಧ್ಯವಾಗದೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಕೊಲೆಗಾರರ ವಿರುದ್ಧ ಉಗ್ರಕ್ರಮ ತೆಗೆದುಕೊಳ್ಳಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಯಾವ ಧರ್ಮದವರೆ ಆಗಲಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ನಾವು ಯಾರ ಪರವು ವಕಾಲತ್ತು ವಹಿಸುವುದಿಲ್ಲ. ಮೊದಲು ಬಿಜೆಪಿಯವರು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಯಬೇಕು ಎಂದರು. ಇದನ್ನೂ ಓದಿ: ಯಾವುದೇ ದೇಶದ್ರೋಹಿಯನ್ನು ಬಿಡೋದಿಲ್ಲ, ಮಟ್ಟ ಹಾಕ್ತೀವಿ: ಆರ್. ಅಶೋಕ್
ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪರನ್ನು ಮಂತ್ರಿಮಂಡಳದಿಂದ ಮೊದಲು ವಜಾ ಮಾಡಬೇಕು. ಬಿಜೆಪಿಯವರು ಹೇಳೋದು ಒಂದು ನಡೆದುಕೊಳ್ಳುವುದು ಮತ್ತೊಂದು. ರಾಷ್ಟ್ರ ಧ್ವಜ ಅಪಮಾನ ಮಾಡಿದ್ದಾರೆ. ಬಿಜೆಪಿಯವರು ಹೇಳುವಂತೆ ನಡೆದರೆ ಸಚಿವ ಈಶ್ವರಪ್ಪನ್ನ ವಜಾ ಮಾಡಬೇಕಿತ್ತು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹರ್ಷನ ಕೊಲೆ ರಾಜಕೀಯ ಪ್ರೇರಿತವೋ ಎಂಬ ಆಯಾಮದಲ್ಲಿ ತನಿಖೆ: ಆರಗ ಜ್ಞಾನೇಂದ್ರ