ಬೆಂಗಳೂರು: ಮಾಜಿ ಸಿಎಂ ವೀರಪ್ಪ ಮೊಯ್ಲಿ, ತಮ್ಮ ಮಗನಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೋರಿ ಸಲ್ಲಿಸಿದ್ದ ಮನವಿಯನ್ನು ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಿಕೊಡಬೇಡಿ ಎಂದು ಮನವಿ ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಸ್ವತಃ ವೀರಪ್ಪ ಮೊಯ್ಲಿ ಅವರು ಸಭೆಯಲ್ಲಿ ತಮ್ಮ ಮಗನ ಟಿಕೆಟ್ ಕುರಿತ ಅರ್ಜಿಯನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ. ಅದ್ದರಿಂದ ಅವರ ಅರ್ಜಿಯನ್ನು ಸ್ಕ್ರೀನಿಂಗ್ ಕಮಿಟಿ ಪಟ್ಟಿಯಿಂದ ಕೈಬಿಟ್ಟಿರುವುದಾಗಿ ತಿಳಿಸಿದರು. ಈ ಸಭೆಯಲ್ಲಿ ಶಾಸಕ ಅಶೋಕ್ ಖೇಣಿ ಹೆಸರು ಸ್ಕ್ರೀನಿಂಗ್ ಕಮಿಟಿಗೆ ಶಿಫಾರಸು ಮಾಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ವೀರಪ್ಪ ಮೊಯ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಟ್ವೀಟ್ ಮಾಡಿ ಭಾರೀ ಸುದ್ದಿಯಾಗಿದ್ದರು. ಅಲ್ಲದೇ ಈ ಘಟನೆ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಮುಜುಗರವನ್ನು ಉಂಟುಮಾಡಿತ್ತು. ಸದ್ಯ ವೀರಪ್ಪ ಮೊಯ್ಲಿ ಅವರೇ ತಮ್ಮ ಮಗ ಹರ್ಷ ಮೊಯ್ಲಿಗೆ ಟಿಕೆಟ್ ಬೇಡ ಎಂದು ಹೇಳಿದರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ಆಕಾಂಕ್ಷಿಯಾಗಿದ್ದ ಹರ್ಷ ಮೊಯ್ಲಿಗೆ ಟಿಕೆಟ್ ನಿರಾಕರಿಸಿದ ಕಾರಣವೇ ಅವರು ಪಕ್ಷದ ವಿರುದ್ಧ ಟ್ವೀಟ್ ಮಾಡಿದ್ದರು ಎನ್ನಲಾಗಿತ್ತು. ಈ ಬಾರಿ ಉಡುಪಿಯ ಕಾರ್ಕಳದಿಂದ ಸ್ಪರ್ಧೆ ನಡೆಸಲು ಹರ್ಷ ಮೊಯ್ಲಿ ಸಿದ್ಧತೆ ನಡೆಸಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು.