ಮೂರು ವರ್ಷದ ಹಿಂದೆಯೇ ಹರೀಶ್ ರಾಯ್ ಅವರಿಗೆ ಗಡ್ಡೆ ರೂಪದಲ್ಲಿ ಕ್ಯಾನ್ಸರ್ ಸೂಚನೆ ನೀಡಿದ್ದರೂ, ಹಣಕಾಸಿನ ಸಮಸ್ಯೆಯಿಂದಾಗಿ ಅದನ್ನು ಆಪರೇಷನ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಕ್ಕಳು ಬೆಳೆಯಲಿ, ಸಿನಿಮಾ ರಂಗದಲ್ಲಿ ಕೈ ತುಂಬಾ ಕೆಲಸ ಸಿಗಲಿ ಎಂದು ಕಾಯುತ್ತಾ ಕುಳಿತಿದ್ದ ಈ ನಟ ಕೊನೆಗೂ ಕ್ಯಾನ್ಸರ್ ತಂದುಕೊಂಡಿದ್ದಾರೆ.
ಹರೀಶ್ ಅವರೇ ಹೇಳುವಂತೆ, ಗಡ್ಡೆಯು ಮೂರು ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದೆ. ಅದನ್ನು ವೈದ್ಯರಿಗೆ ತೋರಿಸಿದಾಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ. ಸಿನಿಮಾ ಸಿಗಲಿ, ಮಕ್ಕಳು ದೊಡ್ಡವರಾಗಲಿ ಎಂದು ಸುಮ್ಮನಾಗಿದ್ದರಂತೆ. ಅದೀಗ ಕ್ಯಾನ್ಸರ್ ಹುನ್ನಾಗಿ ಬದಲಾಗಿದೆ. ಈಗಲೂ ಹಣಕಾಸಿನ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿ ಸಹಾಯ ಮಾಡುವ ಭರವಸೆ ಕೂಡ ಸಿಕ್ಕಿದೆಯಂತೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್
ಗಡ್ಡೆ ಬೆಳೆದ ನಂತರ ಕ್ಯಾನ್ಸರ್ ಕುರುಹುಗಳು ಆಗಾಗ್ಗೆ ಕಂಡರೂ, ಅದನ್ನು ನೆಗ್ಲೆಟ್ ಮಾಡಿದ್ದೂ ಕ್ಯಾನ್ಸರ್ ಆಗಲು ಕಾರಣ ಎನ್ನಲಾಗುತ್ತಿದೆ. ಕೆಜಿಎಫ್ 2 ಸಿನಿಮಾ ಮಾಡುವಾಗ ಲೇಂಥಿ ಫೈಟ್ ಇಟ್ಟಿದ್ದರು. ದೃಶ್ಯ ಮುಗಿದ ಮೇಲೆ ಉಸಿರು ಕಟ್ಟೋಕೆ ಶುರುವಾಯ್ತು. ಯಾವಾಗಲೂ ಕಫ ಮತ್ತು ಕೆಮ್ಮು ಬರ್ತಿತ್ತು. ಡಾಕ್ಟರ್ ಹತ್ತಿರ ಚೆಕ್ ಮಾಡಿಸಿದಾಗ ಲಂಗ್ಸ್ ನಲ್ಲಿ ನೀರಿದೆ ಎಂದು ಹೇಳಿದರು. ಟೆಸ್ಟ್ ಮಾಡಿಸಿದಾಗ ಕ್ಯಾನ್ಸರ್ ಇರುವುದು ಗೊತ್ತಾಯಿತು ಎನ್ನುತ್ತಾರೆ ಹರೀಶ್ ರಾಯ್.
ಈಗಾಗಲೇ ಹಲವರು ಹರೀಶ್ ರಾಯ್ ಗಾಗಿ ಸಹಾಯ ಮಾಡಿದ್ದಾರೆ. ಕನ್ನಡದ ಸ್ಟಾರ್ ನಟರೊಬ್ಬರು ಚಿಕಿತ್ಸೆಗೆ ನೆರವು ನೀಡುವುದಾಗಿಯೂ ತಿಳಿಸಿದ್ದಾರಂತೆ. ಅಲ್ಲದೇ, ಅನೇಕರು ಹರೀಶ್ ರಾಯ್ ಅವರಿಗೆ ಸಹಾಯ ಮಾಡುವಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿಯನ್ನೂ ಮಾಡಿಕೊಂಡಿದ್ದಾರೆ.