ಬೆಂಗಳೂರು: ಹರಿಪ್ರಿಯಾ ಅಂದರೆ ಭಿನ್ನಾತಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದಿರೋ ಪ್ರತಿಭಾವಂತ ನಟಿ. ಅವರ ಪಾಲಿಗೆ ಈ ವರ್ಷ ಸುಗ್ಗಿ ಸಂಭ್ರಮ. ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿ, ಇನ್ನೂ ಒಂದಷ್ಟು ಅವಕಾಶಗಳೂ ಅವರಿಗಾಗಿ ಕಾದು ನಿಂತಿವೆ. ಹೀಗಿರುವಾಗಲೇ ಹರಿಪ್ರಿಯಾ ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರ ಸರಿಯೋ ನಿರ್ಧಾರ ಪ್ರಕಟಿಸಿದ್ದಾರೆ!
ಈ ಸುದ್ದಿ ಕೇಳಿದಾಕ್ಷಣವೇ ಅರೇ ಅಂಥಾದ್ದೇನಾಯ್ತೆಂಬ ದಿಗಿಲು ತುಂಬಿದ ಪ್ರಶ್ನೆ ಕಾಡೋದು ಸಹಜವೇ. ಆದರೆ ಈ ಬಗ್ಗೆ ಖುದ್ದು ಹರಿಪ್ರಿಯಾ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಕೆಲ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರವಾಗಿ ಹೇಳೋದಾದರೆ ಈ ತಾತ್ಕಾಲಿಕ ಬ್ರೇಕ್ ಹಿಂದಿರೋದು ರಿಲ್ಯಾಕ್ಸ್ ಆಗೋ ಉದ್ದೇಶವಷ್ಟೇ!
????❤️???????? pic.twitter.com/4EaAkZwFiY
— HariPrriya (@HariPrriya6) June 17, 2019
`ನಾನು ನಟಿಸಲು ಒಪ್ಪಿಕೊಂಡಿದ್ದ ಬಿಚ್ಚುಗತ್ತಿ, ಕುರುಕ್ಷೇತ್ರ, ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲೀತನಕ, ಕಥಾ ಸಂಗಮ ಸೇರಿದಂತೆ ಎಲ್ಲ ಚಿತ್ರಗಳ ನನ್ನ ಭಾಗದ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿದ್ದೇನೆ. ಈ ಎಲ್ಲ ಸಿನಿಮಾಗಳಲ್ಲಿಯೂ ನನ್ನ ಪಾತ್ರ ವಿಭಿನ್ನವಾಗಿದೆ. ಅದನ್ನು ಪ್ರೇಕ್ಷಕರೆದುರು ಅನಾವರಣಗೊಳಿಸಲು ಕಾತರಳಾಗಿದ್ದೇನೆ. ಇದೆಲ್ಲವನ್ನೂ ಬಿಡುವೇ ಇಲ್ಲದಂತೆ ಮಾಡಿ ಮುಗಿಸಿದ್ದೇನೆ. ಇದೀಗ ನಾನು ಪ್ರವಾಸ ಹೊರಟಿದ್ದೇನೆ. ಈ ಚಿಕ್ಕ ಬ್ರೇಕ್ ಆದ ನಂತರ ಹೊಸ ಚಿತ್ರದ ವಿವರಗಳೊಂದಿಗೆ ನಿಮ್ಮೆದುರು ಮತ್ತೆ ಬರುತ್ತೇನೆ’ ಎಂಬರ್ಥದಲ್ಲಿ ಹರಿಪ್ರಿಯಾ ಬರೆದುಕೊಂಡಿದ್ದಾರೆ.
ಹರಿಪ್ರಿಯಾ ವರ್ಷದಿಂದೀಚೆಗೆ ಒಂದರ ಹಿಂದೊಂದರಂತೆ ಬಿಡುವೇ ಇರದೇ ನಟಿಸುತ್ತಾ ಬಂದಿದ್ದಾರೆ. ಆದ ಕಾರಣ ಒಂದಷ್ಟು ದಿನ ರಿಲ್ಯಾಕ್ಸ್ ಆಗಲು ಪ್ರವಾಸ ಹೊರಟಿರುವಂತಿದೆ. ಇನ್ನು ಮುಂದೆ ಅವರು ನಟಿಸಿರೋ ಸಾಲು ಸಾಲು ಚಿತ್ರಗಳು ತೆರೆ ಕಾಣಲಿವೆ. ಅದರ ಜೊತೆಗೆ ಈ ಬ್ರೇಕ್ ಮುಗಿಸಿಕೊಂಡು ಅವರು ಮತ್ತೆ ಮರಳಲಿದ್ದಾರೆ.