ಮುಂಬೈ: ಇಂಡಿಯನ್ ಪ್ರೀಯರ್ ಲೀಗ್ (ಐಪಿಎಲ್) ನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ‘ಕಪಾಳ ಮೋಕ್ಷ’ ಮಾಡಿದ ಘಟನೆ ಬಗ್ಗೆ ಟೀಂ ಇಂಡಿಯಾ ಬೌಲರ್ ಹರ್ಭಜನ್ ಸಿಂಗ್ ಕ್ಷಮೆ ಕೋರಿದ್ದಾರೆ.
ಘಟನೆ ನಡೆದ ಬರೋಬ್ಬರಿ 10 ವರ್ಷಗಳ ಬಳಿಕ ಹರ್ಭಜನ್ ಈ ಕುರಿತು ಮಾತನಾಡಿದ್ದು, ನಾನು ಶ್ರೀಶಾಂತ್ ಮೇಲೆ ಕೈ ಮಾಡಬಾರದಿತ್ತು. ಅದರಲ್ಲೂ ರಾಷ್ಟ್ರೀಯ ತಂಡದಲ್ಲಿ ಜೊತೆಗೆ ಆಡಿದ್ದ ಶ್ರೀಶಾಂತ್ ಒಬ್ಬ ಉತ್ತಮ ಆಟಗಾರನಾಗಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ನಾನು ಶುಭಕೋರುತ್ತೇನೆ. ಜನರು ಈ ಬಗ್ಗೆ ಎಷ್ಟೇ ಮಾತನಾಡಿದ್ರು, ಇಂದಿಗೂ ಶ್ರೀಶಾಂತ್ ನನ್ನ ಸಹೋದರ ಎಂದು ಹೇಳಿದ್ದಾರೆ.
2008ರ ಐಪಿಎಲ್ ಆವೃತ್ತಿ ವೇಳೆ ಮುಂಬೈ ತಂಡ ಹಾಗೂ ಪಂಜಾಬ್ ತಂಡದಲ್ಲಿ ಇದ್ದ ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ನಡುವೆ ಕಪಾಳ ಮೋಕ್ಷ ಘಟನೆ ನಡೆದಿತ್ತು. ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ಪಡೆದ ವೇಳೆ ಘಟನೆ ನಡೆದಿತ್ತು. ಈ ಘಟನೆ ಕ್ರಿಕೆಟ್ ಅಭಿಮಾನಿಗಳನ್ನು ಶಾಕ್ಗೆ ಗುರಿ ಮಾಡಿತ್ತು. ಶ್ರೀಶಾಂತ್ ಪಂದ್ಯದಲ್ಲಿ ಗೆದ್ದ ವೇಳೆ ಅನುಚಿತವಾಗಿ ಸಂಭ್ರಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಹರ್ಭಜನ್ ಸಿಂಗ್ ಕೋಪದಿಂದ ಶ್ರೀಶಾಂತ್ ಮೇಲೆ ಕೈ ಮಾಡಿದ್ದರು. ಈ ಘಟನೆಯನ್ನು ನೆನಪಿಸಿಕೊಂಡಿರುವ ಹರ್ಭಜನ್ ಮತ್ತೊಮ್ಮೆ ಕ್ಷಮೆ ಕೋರಿದ್ದಾರೆ.
ಈ ಹಿಂದೆಯೂ ಕೂಡ ಹರ್ಭಜನ್ ಘಟನೆ ಬಗ್ಗೆ ಮಾತನಾಡಿ ತಮ್ಮ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಬಿಗ್ ಬಾಸ್ನಲ್ಲಿ ಭಾಗವಹಿಸಿರುವ ಶ್ರೀಶಾಂತ್ ಗೆ ಕ್ಷಮೆ ಕೋರಿದ್ದಾರೆ. ಘಟನೆ ಬಗ್ಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀಶಾಂತ್, ಅಂದು ಹರ್ಭಜನ್ ಕೇವಲ ನನಗೆ ಕಪಾಳ ಮೋಕ್ಷ ಮಾತ್ರವಷ್ಟೇ ಮಾಡಿರಲಿಲ್ಲ, ಬಲವಾಗಿ ಹೊಡೆದಿದ್ದರು ಎಂದು ನೆನಪಿಸಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv