ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸರಿಗಮಪ’ ಕಾರ್ಯಕ್ರಮದಲ್ಲಿ ಹನುಮಂತ ಅವರು ಎಲ್ಲರ ಮನೆ ಮಾತಾಗಿದ್ದಾರೆ. ಈ ವಾರದ ಸರಿಗಮಪ ಕಾರ್ಯಕ್ರಮದಲ್ಲಿ ಫ್ಯಾಮಿಲಿ ರೌಂಡ್ ನಡೆಯಿತು. ಅದರಲ್ಲಿ ಹನುಮಂತ ಅವರಿಗೆ ಸಾಥ್ ನೀಡಲು ಅವರ ಸಹೋದರಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಅತಿಥಿಯಿಂದ ಹನುಮಂತ ಅವರ ತಂಗಿಗೆ ಅಚ್ಚರಿಯ ಉಡುಗೊರೆ ದೊರೆತಿದೆ.
ಸರಿಗಮಪ ಫ್ಯಾಮಿಲಿ ರೌಂಡ್ನಲ್ಲಿ ಹನುಮಂತ ಅವರು ತಮ್ಮ ಸಹೋದರಿ ಕಮಲ ಜೊತೆ ಜನಪದ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಹಳ್ಳಿಯ ಸೊಗಡನ್ನು ಹಾಗೂ ಬಡವರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಗುವ ಕಷ್ಟಗಳ ಬಗ್ಗೆ ಬಣ್ಣಿಸಲಾಗಿತ್ತು. ಹನುಮಂತ ಹಾಗೂ ಕಮಲ ಈ ಹಾಡನ್ನು ಹಾಡಿದ ಬಳಿಕ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರು ಇಬ್ಬರನ್ನು ಮಾತನಾಡಿಸಿದ್ದಾರೆ. ಈ ವೇಳೆ ಕಮಲ ಅವರಿಗೆ ನಿಮ್ಮ ಅಣ್ಣ ಊರಿಗೆ ಬಂದಾಗ ನಿಮಗೆ ಏನು ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರಿಗಮಪ ಕಾರ್ಯಕ್ರಮದಲ್ಲಿ ದಾಖಲೆ ಬರೆದ ಹನುಮಂತ!
ನನ್ನ ಅಣ್ಣ ಊರಿಗೆ ಬಂದಾಗ ನನಗೆ 100 ರೂ. ನೀಡಿದ್ದನು ಎಂದು ಕಮಲ ನಿರೂಪಕಿ ಅನುಶ್ರೀ ಅವರಿಗೆ ಉತ್ತರಿಸಿದ್ದರು. ಆಗ ಅನುಶ್ರೀ, ನೀವು ಆ 100 ರೂ.ಯನ್ನು ಏನು ಮಾಡಿದ್ದೀರಿ ಎಂದು ಕೇಳಿದ್ದಾಗ ನಾನು ಪುಸ್ತಕಗಳನ್ನು ಖರೀದಿಸಿದೆ ಎಂದು ಕಮಲ ಹೇಳಿದ್ದಾರೆ. ಕಮಲ ಅವರ ಮಾತನ್ನು ಕೇಳಿ ಅನುಶ್ರೀ ಹಾಗೂ ಅಲ್ಲಿದ್ದ ತೀರ್ಪುಗಾರರು ಖುಷಿಪಟ್ಟರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಕಾನ್ಫಿಡೆಂಟ್ ಗ್ರೂಪ್ ಮಾಲೀಕರು ಹನುಮಂತ ಹಾಗೂ ಕಮಲ ಅವರ ಹಾಡು ಕೇಳಿ 50,000 ರೂ. ಉಡುಗೊರೆ ನೀಡುವುದಾಗಿ ಘೋಷಿಸಿದರು. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಚಿತ್ರಕ್ಕೆ ಹನುಮಂತನ ಗಾನಾಭಿಷೇಕ..!
ಕಮಲ ಅವರು ಬಿಕಾಂ ಓದುತ್ತಿದ್ದಾರೆ. ಅವರ ಹಾಡನ್ನು ಮೆಚ್ಚಿಕೊಂಡ ಕಾನ್ಫಿಡೆಂಟ್ ಗ್ರೂಪ್ ಮಾಲೀಕರು ಕಮಲ ಅವರ ವಿದ್ಯಾಭ್ಯಾಸಕ್ಕೆ 50,000 ರೂ. ನೀಡುವುದಾಗಿ ಹೇಳಿದರು. ಅಲ್ಲದೇ ಕಮಲ ಬಿಕಾಂ ಮುಗಿಸಿದ್ದಾಗ ಅವರು ತಮ್ಮ ಕಂಪನಿಯಲ್ಲೇ ಕೆಲಸ ಕೊಡಿಸುವುದಾಗಿ ಘೋಷಿಸಿಯೇ ಬಿಟ್ಟರು. ಈ ಮಾತನ್ನು ಅವರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಎಲ್ಲ ಸದಸ್ಯರು ಎದ್ದು ನಿಂತು ಅವರಿಗೆ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು.
ಇದಾದ ಬಳಿಕ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು, “ಹನುಮಂತ ಈ ಕಾರ್ಯಕ್ರಮದ ಫಿನಾಲೆಗೆ ಪ್ರವೇಶಿದರೆ, ನಿಮ್ಮ ಇಡೀ ಕುಟುಂಬ ಫಿನಾಲೆ ಕಾರ್ಯಕ್ರಮಕ್ಕೆ ಬರಬೇಕು” ಎಂದು ಹೇಳಿದ್ದರು. ಆಗ ಕಮಲ ನಾವು ಬರುತ್ತೇವೆ ಎಂದು ಹೇಳಿದ್ದಾರೆ. ಹನುಮಂತ ಹಾಗೂ ಕಮಲ ಹಾಡಿನ ಜನಪದ ಹಾಡಿಗೆ ಜ್ಯೂರಿ ಸದಸ್ಯರು ಫಿದಾ ಆಗಿದ್ದರು. ಇವರಿಬ್ಬರ ಹಾಡಿಗೆ ಮಹಾಗುರುಗಳು ಹಂಸಲೇಖಾ ಅವರು ಗೋಲ್ಡನ್ ಬಝರ್ ಕೂಡ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv