ಹೈದರಾಬಾದ್: ಬೆಂಕಿ ಪೊಟ್ಟಣದಲ್ಲಿ ಮಡಚಿಡುವಂತಹ ಸೀರೆಯನ್ನು ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಕೈಮಗ್ಗ ನೇಕಾರರೊಬ್ಬರು ನೇಯ್ದಿದ್ದಾರೆ.
ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ನಿವಾಸಿಗಳಾದ ನಲ್ಲ ವಿಜಯ್ ಅವರು ಯುವ ಕೈಮಗ್ಗ ನೇಕಾರರಾಗಿದ್ದಾರೆ. ಇವರು ಬೆಂಕಿ ಪೊಟ್ಟಣದಲ್ಲಿ ಮಡಚಿ ಇಡಬಹುದಾದ ಸೀರೆಯನ್ನು ನೇಯ್ದಿದ್ದಾರೆ. ಈ ಸೀರೆಯನ್ನು ಅವರು ತೆಲಂಗಾಣ ಸಚಿವ ಕೆಟಿ ರಾಮರಾವ್, ಸಬಿತಾ ಇಂದ್ರ ರೆಡ್ಡಿ, ವಿ ಶ್ರೀನಿವಾಸ್ ಗೌಡ್ ಮತ್ತು ಎರ್ರಾಬೆಲ್ಲಿ ದಯಾಕರ್ ರಾವ್ ಅವರ ಮುಂದೆ ಪ್ರದರ್ಶಿಸಿದ್ದಾರೆ.
ಯುವ ನೇಕಾರ ವಿಜಯ್ ಮಾತನಾಡಿ, ಮ್ಯಾಚ್ಬಾಕ್ಸ್ನಲ್ಲಿ ಹೊಂದಿಕೊಳ್ಳುವ ಸೀರೆಯನ್ನು ಕೈಯಿಂದ ನೇಯ್ದು ತಯಾರಿಸಲಾಗಿದೆ. ಇದನ್ನು ತಯಾರಿಸಲು ಆರು ದಿನಗಳು ಬೇಕಾಗುತ್ತದೆ. ಸೀರೆಯನ್ನು ತಯಾರಿಸಲು ಯಂತ್ರವನ್ನು ಬಳಸಿದರೆ, ಕೇವಲ ಮೂರು ದಿನಗಳು ಸಾಕಾಗುತ್ತದೆ. ಕೈಯಿಂದ ನೇಯ್ದ ಸೀರೆಗೆ 12,000 ರೂ., ಯಂತ್ರ ಬಳಸಿ ತಯಾರಿಸಿದ ಸೀರೆಗೆ 8,000 ರೂ. ದರವಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಿರ್ಸಿಲ್ಲಾದ ಕೈಮಗ್ಗ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಿದೆ. ನೇಕಾರರು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣವನ್ನು ಅಳವಡಿಸಿಕೊಂಡಿದ್ದಾರೆ. ಇದಕ್ಕೆ ಬೆಂಬಲ ನೀಡಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲ – ಕೈ ಮುಗಿದು ಮುಖದ ಮೇಲೆ ಕೈಯಿಟ್ಟ ಡಿಕೆಶಿ
ವಿಜಯ್ ನೇಯ್ದ ಸೀರೆಯನ್ನು ಈ ಹಿಂದೆ 2017ರಲ್ಲಿ ವಿಶ್ವ ತೆಲುಗು ಸಮ್ಮೇಳನದಲ್ಲಿ ಪ್ರದರ್ಶಿಸಲಾಗಿತ್ತು. ಅವರು 2015ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಮಿಚೆಲ್ ಒಬಾಮಾ ಭಾರತಕ್ಕೆ ಬಂದಾಗ ಅವರಿಗೆ ಸೂಪರ್ ಫೈನ್ ರೇಷ್ಮೆಯಿಂದ ಮಾಡಿದ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಪ್ರತಿಭಾವಂತ ಯುವ ನೇಕಾರನ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಬೆಂಕಿ ಪೊಟ್ಟಣಕ್ಕೆ ಹೊಂದಿಕೊಳ್ಳುವ ಸೀರೆಯ ಬಗ್ಗೆ ಕೇಳಿದ್ದೆವು. ಆದರೆ ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಯೋಗಿ, ಬಿಜೆಪಿಗೆ ಬಿಗ್ ಶಾಕ್ – ಸಚಿವ ಸೇರಿ 4 ಶಾಸಕರು ರಾಜೀನಾಮೆ, ಇಂದು ಎಸ್ಪಿ ಸೇರ್ಪಡೆ