-ಸಣ್ಣ ಪುಟ್ಟ ಕಳ್ಳರನ್ನ ಹಿಡೀತೀರಿ, ಈಗ ಮನ್ಸೂರ್ನನ್ನು ಬಂಧಿಸಿ
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕೂಡಿಕೆ ಮಾಡಿದ್ದ ಅಂಗವಿಕರೊಬ್ಬರು ತಂಗಿ ಮದುವೆಗೆ ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ಐಎಂಎಯಿಂದ ಮೋಸಹೋದ ಸಲೀಂ ಅವರು ಪೊಲೀಸರಿಗೆ ದೂರಿ ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮನ್ಸೂರ್ ಮಾತನ್ನ ನಂಬಿ ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದೆ. ನಮಗೆ ಲಾಭ ಕೊಡ್ತೇನೆ ಎಂದು ಹೇಳಿ ಹಣ ಹೂಡಿಕೆ ಮಾಡಿಸಿಕೊಂಡಿದ್ದನು. ಇದೇ ತಿಂಗಳು 23 ರಂದು ನನ್ನ ತಂಗಿ ಮದುವೆ ನಿಶ್ಚಯವಾಗಿತ್ತು. ಎರಡು ತಿಂಗಳಿಂದ ನಾನು ಹಣ ಕೇಳುತ್ತಾನೆ ಬಂದಿದ್ದೇನೆ. ಹಣವನ್ನು ಕೊಡುತ್ತೇನೆ ಎಂದು ಮನ್ಸೂರ್ ಹೇಳಿದ್ದನು. ಆದರೆ ನಮಗೆ ಮೋಸ ಮಾಡಿ ಓಡಿ ಹೋಗಿದ್ದಾನೆ. ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿ ಹಣ ಕೂಡಿಟ್ಟಿದ್ದೆ ಎಂದು ಅಳಲನ್ನು ಹೇಳಿಕೊಂಡಿದ್ದಾರೆ.
ನಾನು ಮಾತ್ರ ಅಂಗವಿಕಲನಲ್ಲ, ನನ್ನ ಮನೆಯಲ್ಲಿ ಇನ್ನೂ ಮೂವರು ಅಂಗವಿಕಲರಿದ್ದಾರೆ. ನಮ್ಮ ಕಷ್ಟವನ್ನ ನಾನು ಯಾರಿಗೆ ಹೇಳಲಿ. ಸಿಟಿ ಮಾರ್ಕೆಟ್ ನಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿದ್ದೆ. ಒಂದು ಒಂದು ರೂಪಾಯಿ ಕಷ್ಟ ಪಟ್ಟು ಸೇರಿಸಿಟ್ಟಿದ್ದೆ. ಆದ್ರೆ ಐಎಂಎನಲ್ಲಿ ಎರಡುವರೆ ಲಕ್ಷ ಹೂಡಿಕೆ ಮಾಡಿ ಮೋಸ ಹೋಗಿದ್ದೇನೆ ಎಂದು ನೊಂದರು.
ಏನು ಮಾಡುತ್ತಿದ್ದಾರೆ ಈ ಪೊಲೀಸರು? ಡಿಸಿಪಿ, ಎಸಿಪಿ ಎಲ್ಲಾ ಎಲ್ಲಿ ಹೋಗಿದ್ದಾರೆ? ಸಣ್ಣ ಪುಟ್ಟ ಕಳ್ಳತನ ಮಾಡಿದವರನ್ನ ಅರೆಸ್ಟ್ ಮಾಡುತ್ತಾರೆ. ಈಗ ಕೋಟಿಗಟ್ಟಲೆ ಹಣ ದೋಚಿ ಪರಾರಿಯಾಗಿರುವ ಮನ್ಸೂರ್ ಖಾನ್ನನ್ನ ಪೊಲೀಸರು ಬಂಧಿಸಲಿ. ಅಮಾಯಕರ ಹಣವನ್ನು ವಾಪಾಸ್ ಕೊಡಿಸಲಿ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.