ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಮುರುಘಾ ಶ್ರೀ ಮಠದ ಸ್ವಾಮೀಜಿಗಳ ಮೇಲೆ ಬಂದಿರುವಂತಹ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆ ಸೂಕ್ತ ಮಟ್ಟದಲ್ಲಿ ನಡೆಯುತ್ತಿಲ್ಲ ಎನ್ನುವುದು ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಆದ್ದರಿಂದ ಈ ಕೇಸನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹಿಂದುಸ್ತಾನ್ ಜನತಾ ಪಕ್ಷದಿಂದ ಒತ್ತಾಯಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಹರೀಶ್, ನನಗೆ ತಿಳಿದಿರುವ ಹಾಗೆ ಯಾವುದೇ ಕೇಸ್ನಲ್ಲಿ ಆಪಾದನೆ ಬಂದ ಕೂಡಲೇ ಆಪಾದಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆಮೇಲೆ ವಿಚಾರಣೆಗೆ ಒಳಪಡಿಸುತ್ತಾರೆ. ಆದರೆ ಇಂದಿಗೆ 7 ದಿನ ಆದರೂ ಇನ್ನೂ ಕೂಡ ಸ್ವಾಮೀಜಿಯ ಬಂಧನವಾಗಿಲ್ಲ, ವಿಚಾರಣೆಯೂ ನಡೆದಿಲ್ಲ. ಪ್ರತಿಷ್ಠಿತ ದೊಡ್ಡ ಸಮಾಜದ ಮಠದ ಸ್ವಾಮೀಜಿ ಎಂದು ಅಂಜಿಕೆಯೇ? ಅಥವಾ ಆ ಸಮಾಜದ ವೋಟ್ ಬ್ಯಾಂಕನ್ನು ಕಳೆದುಕೊಳ್ಳುತ್ತೇವೆ ಎನ್ನುವ ಭಯವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಂದು ತನಿಖಾಧಿಕಾರಿ ಕೈಗೆ ವಿದ್ಯಾರ್ಥಿನಿಯರ ಹೇಳಿಕೆ – ಮುರುಘಾ ಶ್ರೀಗೆ ಸಿಗುತ್ತಾ ಜಾಮೀನು..?
ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳನ್ನು ಆಸ್ಪತ್ರೆ, ಕೋರ್ಟ್ ಕಚೇರಿ, ಹಲವಾರು ವಿಚಾರಣೆಗಳಿಗೆ ಅಲೆದಾಡಿಸುತ್ತಿದ್ದಾರೆ. ಆದರೆ ಸ್ವಾಮೀಜಿಗಳು ಮಾತ್ರ ದೊಡ್ಡ ಬಂಗಲೆಯ ಮಠದಲ್ಲಿ ಐಷಾರಾಮಿ ಕಾರ್ನಲ್ಲಿ ಓಡಾಡುತ್ತಾ ಸುತ್ತಲೂ ಪ್ರತಿಷ್ಠಿತ ವ್ಯಕ್ತಿಗಳು, ರಾಜಕಾರಣಿಗಳು, ಉದ್ಯಮಿಗಳು, ಕೆಲವು ಸ್ವಾಮೀಜಿಗಳನ್ನು ಜೊತೆಗೆ ಹಾಕಿಕೊಂಡು ಆರಾಮವಾಗಿ ಸುತ್ತುತ್ತಿದ್ದಾರೆ. ಇದು ಎಂಥ ನ್ಯಾಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಯ ವಿರುದ್ಧ ಹೋರಾಟ ಮಾಡಲು ಬಂದಂತಹ ಸಾರ್ವಜನಿಕರನ್ನು ಮಠದ ಒಳಗಡೆ ಬಿಡದೆ ಲಾಟಿ ಚಾರ್ಜ್ ಮಾಡಿ ಓಡಿಸಿರುವುದು ಎಷ್ಟರಮಟ್ಟಿಗೆ ಸರಿ? ವಿರೋಧ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ಸಚಿವರಾಗಲಿ, ಯಾವ ಶಾಸಕರಾಗಲಿ ಇಲ್ಲಿಯವರೆಗೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳು ಅನಾಥರು ಹಾಗೂ ದಲಿತರಿದ್ದಾರೆ ಅಂತ ಅವರನ್ನು ಬೆಂಬಲಿಸಿ ಒಂದು ಚಕಾರವನ್ನು ಎತ್ತದಿರುವುದು ವೋಟ್ ಬ್ಯಾಂಕ್ನ ರಾಜಕಾರಣ ಎಂದು ಜಗತ್ತಿಗೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಇಂದು ಯೋಗಿ ಆದಿತ್ಯನಾಥ್, ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ
ಕನ್ನಡಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಸಣ್ಣ ಪುಟ್ಟ ವಿಚಾರಕ್ಕೆ ದೊಡ್ಡ ಮಟ್ಟದ ಹೋರಾಟ ಮಾಡುತ್ತವೆ. ರಾಜ್ಯದಲ್ಲಿ ನಡೆದಿರುವಂತಹ ಇಂತಹ ದೊಡ್ಡ ದೌರ್ಜನ್ಯದ ಹಗರಣದ ವಿರುದ್ಧ ಯಾಕೆ ಗಟ್ಟಿ ಹೋರಾಟ ಮಾಡುತ್ತಿಲ್ಲ ಎನ್ನುವುದು ನಮ್ಮ ಪ್ರಶ್ನೆ. ಆದ್ದರಿಂದ ಪ್ರತಿಷ್ಠಿತ ರಾಜಕಾರಣಿಗಳು, ವಿರೋಧ ಪಕ್ಷಗಳು ಸ್ವಾಮೀಜಿಗೆ ಬೆಂಬಲ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಅನಾಥ, ದಲಿತ ಹೆಣ್ಣು ಮಕ್ಕಳ ಪರವಾಗಿ ಧ್ವನಿ ಎತ್ತಬೇಕು ಎಂಬುದು ನಮ್ಮ ಪಕ್ಷದ ಉದ್ದೇಶ. ಈ ಕೂಡಲೇ ಸರ್ಕಾರ ಬಿಗಿಯಾದ ನಿಲುವು ತೆಗೆದುಕೊಂಡು ಸ್ವಾಮೀಜಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ನಿಮ್ಮ ಕೈಯಲ್ಲಿ ಅದು ಆಗದಿದ್ದರೆ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.