ಬೆಂಗಳೂರು: ತೃತೀಯ ಲಿಂಗಿಗಳಿಗೆ ಸಮರ್ಪಕ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ತೃತೀಯ ಲಿಂಗಿಗಳು ಒಳಗೊಂಡ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಭರವಸೆ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ತೃತೀಯ ಲಿಂಗಿಗಳಿಗೆ ಸೌಲಭ್ಯ ನೀಡುವ ವಿಚಾರವಾಗಿ ಸರ್ಕಾರದ ಗಮನ ಸೆಳೆದರು. ರಾಜ್ಯದಲ್ಲಿ ತೃತೀಯ ಲಿಂಗಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ತೃತೀಯ ಲಿಂಗಿಗಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಒಂದು ಸಮಿತಿ ರಚನೆ ಮಾಡಬೇಕು. ಈ ಸಮಿತಿಯಲ್ಲಿ ತೃತೀಯ ಲಿಂಗಿಗಳು ಇರಬೇಕು. ತೃತೀಯ ಲಿಂಗಿಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಬೇಕು ಅಂತ ಭಾರತಿ ಶೆಟ್ಟಿ ಒತ್ತಾಯ ಮಾಡಿದರು. ಅಲ್ಲದೆ ಪೊಲೀಸ್ ಪೇದೆ, ಅಂಗನವಾಡಿ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಹಾಲಪ್ಪ ಆಚಾರ್ ಅವರು, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 20266 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ತೃತೀಯ ಲಿಂಗಿಗಳ ಅಂಕಿ-ಅಂಶಗಳ ಸಂಗ್ರಹಕ್ಕೆ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮಂಗಳೂರಿನ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ
ಎಲ್ಲಾ ಇಲಾಖೆಗಳಲ್ಲಿ ನೇಮಕಾತಿಯಲ್ಲಿ 1% ಹುದ್ದೆ ಮೀಸಲು ಇಡಲಾಗಿದೆ. ಆದರೆ ಎಲ್ಲಾ ಇಲಾಖೆಯಲ್ಲಿ ಇದು ಜಾರಿ ಆಗಿಲ್ಲ. ಎಲ್ಲಾ ಇಲಾಖೆಯಲ್ಲಿ 1% ಮೀಸಲಾತಿ ನಿಯಮ ಜಾರಿಗೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ
ಈಗಾಗಲೇ ತೃತೀಯ ಲಿಂಗಿಗಳಿಗೆ ಮಾಶಾಸನ ನೀಡಲಾಗುತ್ತಿದೆ. ತೃತೀಯ ಲಿಂಗಿಗಳಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಒಂದು ಸಮಿತಿ ರಚನೆ ಮಾಡುತ್ತೇವೆ. ಸಮಿತಿಯಲ್ಲಿ ತೃತೀಯ ಲಿಂಗಗಳು ಇರಲಿದ್ದಾರೆ. ಸಮಿತಿ ವರದಿ ಆಧರಿಸಿ ತೃತೀಯ ಲಿಂಗಿಗಳಿಗೆ ಸೌಲಭ್ಯಗಳನ್ನ ನೀಡಲು ಅಗತ್ಯ ಕ್ರಮವಹಿಸುತ್ತೇವೆ ಎಂದರು.