– ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರ ಮೊದಲ ಭೇಟಿ ಹೊತ್ತಲ್ಲೇ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದನಾ ಸಭೆಗೆ ಜಿಲ್ಲೆಯ ಎರಡು ಬಂಟ ಶಾಸಕರು ಗೈರಾಗಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಳೀನ್ ಕುಮಾರ್ ಕಟೀಲ್ ಅವರು ಉಡುಪಿಗೆ ಆಗಮಿಸಿದ್ದರು. ಈ ಸಂದರ್ಭ ಜಿಲ್ಲಾ ಬಿಜೆಪಿ ನಾಯಕರಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಶೇಷಶಯನ ಸಭಾ ಭವನದಲ್ಲಿ ನಳೀನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಸಭೆಯೂ ಆಯೋಜನೆಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಗೈರಾಗಿದ್ದ ಇಬ್ಬರು ಶಾಕಸಕರ ವಿಚಾರವೇ ಇಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯ್ತು.
ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈ ಸಭೆಗೆ ಗೈರು ಹಾಜರಾಗಿದ್ದಾರೆ. ವೇದಿಕೆಯಲ್ಲಿ ಹಾಲಾಡಿಗೆ ಕುರ್ಚಿ ಇಟ್ಟು, ಹೆಸರಿನ ಸ್ಟಿಕ್ಕರ್ ಅಂಟಿಸಿ ಬಿಜೆಪಿ ಕಾರ್ಯಕರ್ತರಯ ಕಾದದ್ದೇ ಬಂತು ವಿನಃ ಶಾಸಕರು ಮಾತ್ರ ಬರಲಿಲ್ಲ.
ನಳಿನ್ ಕುಮಾರ್ ಕಟೀಲ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬೈಂದೂರು ಸುಕುಮಾರ ಶೆಟ್ಟಿ ಬಂಟ ಸಮುದಾಯದವರು. ಜಾತಿಗೆ ಜಾತಿ ಹಗೆ ಅನ್ನೋದು ಕರಾವಳಿಯಲ್ಲಿ ಚಾಲ್ತಿಯಲ್ಲಿರುವ ಗಾದೆಯಾಗಿದೆ. ಅದರಂತೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಯಡಿಯೂರಪ್ಪ ಬೆಂಬಲಿಗನಾಗಿರೋದರಿಂದ ಕಟೀಲ್ ಅವರ ಅಭಿನಂದನಾ ಸಭೆಗೆ ಬಂದಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಂಪುಟ ರಚನೆ ಮಾಡುವಾಗ ಉಡುಪಿ ಜಿಲ್ಲೆಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟರಿಗೆ ಸ್ಥಾನ ಸಿಗುವ ನಿರೀಕ್ಷೆಯನ್ನು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಬಂಟ ಸಮುದಾಯ ಇರಿಸಿತ್ತು. ಆದರೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಗೆ ಮಂತ್ರಿ ಸ್ಥಾನ ನೀಡಿದ್ದಕ್ಕೆ ಕುಂದಾಪುರ ಶಾಸಕರು ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು.
ಜಿಲ್ಲೆಯ ಬಂಟ ಸಮುದಾಯ ಕೂಡ ಬಿಜೆಪಿ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿತ್ತು. ಹೀಗಾಗಿಯೇ ಇಂದು ಕುಂದಾಪುರ ಶಾಸಕರು ರಾಜ್ಯಾಧ್ಯಕ್ಷರ ಅಭಿನಂದನಾ ಸಭೆಗೆ ಗೈರಾಗಿದ್ದಾರೆ. ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಕೂಡ ಗೈರಾಗುವ ಮೂಲಕ ತಮ್ನ ಅಸಮಾಧಾನವನ್ನು ಹೊರಗೆಡವಿದ್ದಾರೆ. ಸಚಿವ ಸಂಪುಟ ರಚನೆ ಬಳಿಕ ಒಳಗೊಳಗೆ ಅಸಮಾಧಾನ ಕುದಿಯುತ್ತಿದ್ದರೂ ನಮ್ಮಲ್ಲಿ ಅಸಮಾಧಾನ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.