ಚಿಕ್ಕೋಡಿ: ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು, ವಿವಿಧ ಎಟಿಎಂಗಳ ಮೂಲಕ 3 ಲಕ್ಷ ರೂ.ಗೂ ಅಧಿಕ ಹಣವನ್ನು ಎಗರಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹುಕ್ಕೇರಿ ಪಟ್ಟಣದ ಸ್ಟೇಟ್ ಬ್ಯಾಂಕ್ ಓಫ್ ಇಂಡಿಯಾ ಶಾಖೆಯ 8 ಗ್ರಾಹಕರ ಬ್ಯಾಂಕ್ ಆಕೌಂಟ್ಗಳನ್ನು ಹ್ಯಾಕ್ ಮಾಡಿದ್ದು, ಬೆಳಗಾವಿ, ಕೊಲ್ಲಾಪುರ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ಎಟಿಎಂ ಕೇಂದ್ರಗಳಿಂದ ಹಣ ಡ್ರಾ ಮಾಡಿಕೊಂಡಿದ್ದಾರೆ. ಯೋಧ ಶಿವಾನಂದ ಮುರಗಿ ಅವರ 2 ತಿಂಗಳ ವೇತನ 80 ಸಾವಿರ ರೂ., ಮಾರುತಿ ನಾಶಿಪುಡಿ ಅವರ 34 ಸಾವಿರ ರೂ. ಸೇರಿದಂತೆ ಒಟ್ಟು 8 ಜನರ 3 ಲಕ್ಷಕ್ಕೂ ಅಧಿಕ ಹಣಕ್ಕೆ ಖದೀಮರು ಅಕ್ಟೋಬರ್ 11 ಹಾಗೂ 12ರಂದು ಕನ್ನ ಹಾಕಿದ್ದಾರೆ.
ಎಟಿಎಂನಿಂದ ಹಣ ಪಡೆದ ಮೆಸೇಜ್ ಗ್ರಾಹಕರ ಮೊಬೈಲ್ಗೆ ಬಂದಿದೆ. ನಾವು ಹಣ ಪಡೆದುಕೊಳ್ಳದೇ ಹೇಗೆ ನಮ್ಮ ಖಾತೆಯಿಂದ ಹಣ ಕಡಿತವಾಗಿದೆ ಅಂತ ಗ್ರಾಹಕರು ಗಾಬರಿಗೊಂಡು, ಪೊಲೀಸ್ ಹಾಗೂ ಬ್ಯಾಂಕ್ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಈ ಸಂಬಂಧ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬ್ಯಾಂಕ್ ಮೇಲೆ ವಿಶ್ವಾಸವಿಟ್ಟು ನಾವು ಹಣ ಇಟ್ಟಿದ್ದೇವೆ. ನಾನು ರೈತ, ಯಾರೊಬ್ಬರಿಗೂ ಎಟಿಎಂ ನೀಡಿಲ್ಲ. ಪಿನ್ ನಂಬರ್ ಕೂಡ ಕೊಟ್ಟಿಲ್ಲ. ಆದರೂ ನಮ್ಮ ಖಾತೆಯಿಂದ ಹಣ ಕಡಿತವಾಗಿದೆ. ಬ್ಯಾಂಕ್ ಅಧಿಕಾರಿಗಳೇ ನಮ್ಮ ಹಣವನ್ನು ಮರು ಪಾವತಿಸಬೇಕು ಎಂದು ಹಣ ಕಳೆದುಕೊಂಡ ಗ್ರಾಹಕರೊಬ್ಬರು ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv