ಮೈಸೂರು: ನಾನು ಸೋತಿದ್ದೇನೆ. ಹಾಗಂತ ನಾನು ಸತ್ತಿಲ್ಲ. ರಾಜಕೀಯವಾಗಿ, ಸಾರ್ವಜನಿಕವಾಗಿ, ಅಭಿವೃದ್ಧಿ ವಿಚಾರದಲ್ಲಿ ಬದುಕಿದ್ದೇನೆ ಎಂದು ಹುಣಸೂರು ಉಪಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ.
ಹುಣಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹುಣಸೂರು ಚುನಾವಣೆ ಸೋಲಿನಿಂದ ತಾನು ಕುಗ್ಗಿಲ್ಲ ಎಂದು ಹೇಳಿದರು. ರಾಜಕೀಯವಾಗಿ ಸೋಲು, ಗೆಲವು ಮಾಮೂಲಿ. ನಾನು ಬೈ ಎಲೆಕ್ಷನ್ನಲ್ಲಿ ಸೋತಿದ್ದೇನೆ ಹೊರತು ಸತ್ತಿಲ್ಲ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ತಮ್ಮ ಶಕ್ತಿಯ ಸಂದೇಶ ರವಾನಿಸಿದರು.
ಕೆಲವರು ತಾವು ಬಾರಿ ಸತ್ಯವಂತರು ಅನ್ನೋ ರೀತಿ ನಾನು ಹಣ ತಿಂದೆ ಅಂತಾ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದರು. ಆದರೆ ನಾನು ತಿಂದವನಲ್ಲ, ತಿನ್ನಿಸಿದವನು. ನಾನು ಯಾರ ಅನ್ನಕ್ಕೂ ಕೈ ಹಾಕಿಲ್ಲ, ನಾನೇ ಲಕ್ಷಾಂತರ ಮಕ್ಕಳಿಗೆ ಅನ್ನ ಕೊಡುವ ಯೋಜನೆ ಮಾಡಿದ್ದೇನೆ. ನನಗೆ ದೊಡ್ಡ ದೂರದರ್ಶಿತ್ವ ಇದೆ ಎಂದು ತಿರುಗೇಟು ನೀಡಿದರು.
ಹುಣಸೂರು ಉಪಚುನಾವಣೆಯ ಸೋಲಿಗೆ ಕಾರಣ ಏನೂ ಎಂಬುದು ಜನರಿಗೆ, ಮಾಧ್ಯಮದವರಿಗೆ ಗೊತ್ತಿದೆ. ಮಾಧ್ಯಮದವರು ಅದನ್ನು ನೇರವಾಗಿ ಬರೆಯುತ್ತಿಲ್ಲ. ಜನ ಅದನ್ನು ಮಾತನಾಡುತ್ತಿಲ್ಲ ಅಷ್ಟೇ ಎಂದು ವಿಶ್ವನಾಥ್ ಅಸಮಾಧಾನ ಹೊರಹಾಕಿದರು.