ಮೈಸೂರು: ಮಂತ್ರಿಗಳನ್ನು ಅನರ್ಹರು ಎಂದ ಮಾಜಿ ಸಿಎಂ ಸಿದ್ದುಗೆ ಹಳ್ಳಿಹಕ್ಕಿ ವಿಶ್ವನಾಥ್ ಕುಟುಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರಿಂದ ಸಂವಿಧಾನಕ್ಕೆ ಅಪಚಾರ ಆಗಿದೆ. ಸಿದ್ದರಾಮಯ್ಯ ಸಂವಿಧಾನಕ್ಕೆ ಗೌರವ ಕೊಡುತ್ತಿದ್ದಾರೋ ಅಥವಾ ಅಗೌರವ ಕೊಡುತ್ತಿದ್ದಾರೋ ಎಂದು ವಿಶ್ವನಾಥ್ ಪ್ರಶ್ನೆ ಹಾಕಿದ್ದಾರೆ.
ಜನತಾ ನ್ಯಾಯಾಲಯದಲ್ಲಿ ಗೆದ್ದು ಬಂದವರನ್ನು ನೀವು ಹೇಗೆ ಗೆದ್ರಿ, ನನಗೆ ಗೊತ್ತಿದೆ ಎಂದರೆ ಏನರ್ಥ? ಹಾಗಾದರೆ ಇವರು ಹೇಗೆ ಗೆದ್ದರು? ಎಲ್ಲ ಎಲೆಕ್ಷನ್ಗಳು ದುಡ್ಡಿನಿಂದಲೇ ಆಗುತ್ತಾ? ಸಂವಿಧಾನ ಡೇಂಜರ್ ಎಂದು ಭಾಷಣ ಮಾಡುವ ಸಿದ್ದರಾಮಯ್ಯ ಅವರೇ ಸಂವಿಧಾನಕ್ಕೆ ಅಗೌರವ ಕೊಡುತ್ತಿದ್ದಾರೆ. ಹಾಗಾದರೆ ಸುಪ್ರೀಂಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಗೌರವ ಕೊಡುತ್ತಿಲ್ಲ ಎಂದು ಅರ್ಥ ಎಂದು ವಿಶ್ವನಾಥ್ ಗರಂ ಆದರು. ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಪಕ್ಷಾಂತರಿಗಳು 17 ಜನ ಒಟ್ಟಾಗಿ ಇಲ್ಲವೆಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವಾಗಲು ಅವರನ್ನು ತಬ್ಬಿಕೊಂಡು ಇರಲು ಆಗುತ್ತಾ. ಗಂಡ- ಹೆಂಡತಿಯೇ ಜೊತೆಯಾಗಿ ಇರೋದಿಲ್ಲ. ನಾವು ಯಾವಾಗಲು ಜೊತೆಯಾಗಿ ಇರಲು ಆಗುತ್ತಾ ಎಂದು ಹೇಳಿದರು. ಅಲ್ಲದೆ ಗುರುವಾರ ಕಾರ್ಯಕ್ರಮಕ್ಕೆ ಹೋಗಿದ್ದೆ. ಗುರುವಾರ ಕಾರ್ಯಕ್ರಮ ಚೆನ್ನಾಗಿ ಆಯಿತು. ನನ್ನ ಅನುಭವ ಬಳಸಿಕೊಳ್ಳಿ ಎಂದು ಕೂಗಿ ಹೇಳೋಕೆ ಆಗೋಲ್ಲ. ಮಂತ್ರಿಯಾಗಿರಲಿ ಆಗಿಲ್ಲದೆ ಇರಲಿ ಅನುಭವಸ್ಥರ ಅನುಭವ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.