ಮೈಸೂರು: ವಾರಣಾಸಿಯಲ್ಲಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಸ್ವಾಗತಾರ್ಹ. ಆದರೆ ಕಾರ್ಯಕ್ರಮದಲ್ಲಿ ಒಂದು ಸಣ್ಣ ಲೋಪವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಣಾಸಿಯನ್ನು ಬೇರೆ ಬೇರೆ ಧರ್ಮದವರು ನಾಶ ಮಾಡಿದ್ದರು. 16ನೇ ಶತಮಾನದಲ್ಲಿ ಉಳಿಸಿದ್ದು ಅಹಲ್ಯಬಾಯಿ. ಅವರೇ ಕಾಶಿ ವಿಶ್ವನಾಥ ದೇವಸ್ಥಾನ ಉಳಿಸಿದ್ದರು. ಯುದ್ಧದ ಬದಲು ಯುಕ್ತಿಯಿಂದ ಉಳಿಸಿದ್ದರು. ಶಿವನ ಹೆಸರಲ್ಲೇ ಅವರು ಆಡಳಿತ ಮಾಡಿದ್ದರು. ಇಂತಹ ಯುಕ್ತಿ ಪ್ರದರ್ಶಿಸಿದ ಅಹಲ್ಯಬಾಯಿ ಅವರನ್ನು ಎಲ್ಲರೂ ಮರೆತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಸಹ ಮರೆತಿದ್ದಾರೆ ಎಂದು ಆರೋಪಿಸಿದರು.
ಸ್ತ್ರೀಯನ್ನು ಮರೆತರೆ ಚರಿತ್ರೆಯನ್ನು ಮರೆತಂತೆ. ಇದು ಬಹಳ ವೇದನೆಯ ವಿಚಾರವಾಗಿದೆ. ವಾರಣಾಸಿಯಲ್ಲಿ ಅಹಲ್ಯಬಾಯಿ ಪ್ರತಿಮೆ ಮಾಡಿಸಿ ಹಾಗೂ ಅಲ್ಲಿನ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಿ ಎಂದು ಪ್ರಧಾನಿ ಮೋದಿ ಅವರಲ್ಲಿ ವಿನಂತಿಸಿದರು. ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 15 ಸೀಟ್ ಗೆಲುವು- ಬಿಎಸ್ವೈ ವಿಶ್ವಾಸ
ಉತ್ತರ ಪ್ರದೇಶದಲ್ಲಿ ಒಂದೂವರೆ ಕೋಟಿ ಜನ ಕುರುಬರು ಇದ್ದಾರೆ. ಕುರುಬ ಜನಾಂಗಕ್ಕೆ ಸೇರಿದ ಅಹಲ್ಯಬಾಯಿ ಅವರನ್ನು ಮರೆತಿರುವುದು ಪ್ರಮಾದವಾಗಿದೆ. ನಮ್ಮದು ಸಹ ದೊಡ್ಡ ಮಠವಾಗಿದೆ. ಹಾವೇರಿ, ಕಲಬುರಗಿ, ರಾಯಚೂರು ಸೇರಿ ನಾಲ್ಕು ಕಡೆ ಇದೆ. ನಮ್ಮ ಕಾಗಿನೆಲೆ ಪಕ್ಕಾ ಹಿಂದೂಗಳ ಮಠವಾಗಿದೆ. ನಮ್ಮ ಜನಾಂಗ ಹಿಂದೂ ಧರ್ಮದ ಪ್ರತಿಪಾದಕರಾಗಿದ್ದವರು. ಹಾಗಾದರೆ ಕುರುಬರು ಬೇಡವಾ ನಿಮಗೆ ಎಂದು ಪ್ರಶ್ನಿಸಿದರು.