ಸಿಎಂ ಭೇಟಿ ಮಾಡಿದ ವಿಶ್ವನಾಥ್ – ಸುಪ್ರೀಂಕೋರ್ಟ್ ಆದೇಶದ ಪರಾಮರ್ಶೆಗೆ ಮನವಿ

Public TV
2 Min Read
vishwanth yeddyurppa

ಬೆಂಗಳೂರು: ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಕೊಡುವುದು ಬೇಡ ಎಂಬ ನಿರ್ಧಾರ ಈಗಾಗಲೇ ಆಗಿದೆ. ನಿನ್ನೆ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಸಹ ಇದನ್ನು ಅಧಿಕೃತವಾಗಿ ಹೇಳಿದ್ದಾರೆ. ಸಿಎಂ ಹೇಳಿಕೆ ಬೆನ್ನಲ್ಲೇ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗಾಜ್ ತೀವ್ರವಾಗಿ ಅಸಮಧಾನ ವ್ಯಕ್ತಪಡಿಸಿದ್ದರು. ನಿನ್ನೆ ಸಂಜೆಯೇ ಎಂಟಿಬಿ ನಾಗರಾಜ್ ಸಿಎಂ ಭೇಟಿ ಮಾಡಿ ಚರ್ಚಿಸಿ ಹೋಗಿದ್ದರು. ಈ ಬೆನ್ನಲ್ಲೇ ಇವತ್ತು ಎಚ್ ವಿಶ್ವನಾಥ್ ಸಹ ಮೈಸೂರಿನಿಂದ ಆಗಮಿಸಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಇವತ್ತು ಬೆಳಗ್ಗೆ ಧವಳಗಿರಿ ನಿವಾಸಕ್ಕೆ ಆಗಮಿಸಿದ ಎಚ್ ವಿಶ್ವನಾಥ್ ಸುಮಾರು ಅರ್ಧ ಗಂಟೆ ಕಾಲ ಸಿಎಂ ಜೊತೆ ಚರ್ಚೆ ನಡೆಸಿದರು. ಸುಪ್ರೀಂಕೋರ್ಟ್ ನೀಡಿದ ಆದೇಶ ಕುರಿತು ಸಿಎಂ ಬಿಎಸ್‍ವೈ ಜೊತೆ ವಿಶ್ವನಾಥ್ ಚರ್ಚೆ ನಡೆಸಿದರು ಎನ್ನಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಬಗ್ಗೆ ತಪ್ಪಾಗಿ ಅರ್ಥೈಸಲಾಗುತ್ತಿದೆ. ಸೋತವರಿಗೆ ಸಚಿವ ಸ್ಥಾನ ಕೊಡಬಾರದು ಎಂಬ ಆದೇಶ ಆಗಿಲ್ಲ ಎಂದು ವಿಶ್ವನಾಥ್ ಸಮಜಾಯಿಷಿ ನೀಡಿದ್ದಾರೆ ಎಂದು ಹೇಳಲಾಗಿದೆ.

H Vishwanath

ಕಾನೂನು ತಜ್ಞರ ಜೊತೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಆದೇಶದ ಪರಾಮರ್ಶೆ ನಡೆಸಬೇಕೆಂದು ಇದೇವೇಳೆ ವಿಶ್ವನಾಥ್ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸ್ಥಾನ ಕೈತಪ್ಪಿದ್ದರಿಂದ ಈಗಾಗಲೇ ಬೇಸರದಲ್ಲಿರುವ ವಿಶ್ವನಾಥ್ ಸಂಪುಟ ಸೇರ್ಪಡೆ ಸಂಬಂಧ ಹೆಚ್ಚು ಚರ್ಚೆ ನಡೆಸಿಲ್ಲ ಎನ್ನಲಾಗಿದೆ.

ಸಿಎಂ ಭೇಟಿ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ವಿಶ್ವನಾಥ್, ಮಂತ್ರಿ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ನಾನು ಪ್ರಸ್ತಾಪ ಮಾಡಿಲ್ಲ. ಮುಂದೆಯೂ ಈ ಪ್ರಸ್ತಾಪ ಮಾಡುವುದಿಲ್ಲ. ಹುಣಸೂರು ನಗರಸಭಾ ಚುನಾವಣೆ ಇದೇ 9 ರಂದು ಇದೆ. ಅದರ ವಿಚಾರ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಜೊತೆಗೆ ಜಿಲ್ಲಾ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಂತ್ರಿ ಸೋಮಣ್ಣ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇವೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪು, ಕಾನೂನು ತೊಡಕು ವಿಚಾರದ ಬಗ್ಗೆ ಈಗಾಗಲೇ ಸಿಎಂ ಹೇಳಿಕೆ ನೀಡಿದ್ದಾರೆ. ನಾನು ಕೂಡ ಅದರ ಬಗ್ಗೆ ಹೇಳಿಯಾಗಿದೆ. ಮತ್ತೆ ಆ ವಿಷಯದ ಪ್ರಸ್ತಾಪ ಅಗತ್ಯವಿಲ್ಲ. ಜೊತೆಗೆ ಈಗ ಮಂತ್ರಿಮಂಡಲ ವಿಸ್ತರಣೆ ಹಾಗೂ ನಾನು ಮಂತ್ರಿಯಾಗುವ ವಿಚಾರವನ್ನು ಈಗ ಪ್ರಸ್ತಾಪ ಮಾಡಿಲ್ಲ. ಏನು ಮಾಡಬೇಕು ಎಂದು ಅವರಿಗೆ ಗೊತ್ತು ಎಂದು ಇದೇ ವೇಳೆ ಪರೋಕ್ಷವಾಗಿ ವಿಶ್ವನಾಥ್ ಅಸಮಧಾನ ಹೊರಹಾಕಿದರು. ಮುಂದಿನ ದಿನಗಳಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸದ ವಿಶ್ವನಾಥ್, ಅದನ್ನು ಸಿಎಂ ಹತ್ತಿರವೇ ಕೇಳಿ. ಅದನ್ನು ನಾನು ಹೇಗೆ ಹೇಳೋದು ಎಂದು ಹೇಳಿ ಹೋದರು.

Share This Article
Leave a Comment

Leave a Reply

Your email address will not be published. Required fields are marked *