ಬೆಂಗಳೂರು: ಶುಕ್ರವಾರ ಸದನದಲ್ಲಿ ನಡೆದ ಚರ್ಚೆಯ ವೇಳೆ ಸಚಿವ ಸಾ.ರಾ.ಮಹೇಶ್ ಅವರು ಎಚ್. ವಿಶ್ವನಾಥ್ ಮೇಲೆ 28 ಕೋಟಿ ರೂಪಾಯಿಯ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್ ಅವರು ಮಹೇಶ್ ಅವರಿಗೆ ಧೈರ್ಯವಿದ್ದರೆ ಪ್ರತಿಕಾಗೋಷ್ಠಿ ಮಾಡಿ ಆರೋಪ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಚ್.ವಿಶ್ವನಾಥ್, ಕೆಲವು ಕಾರಣಗಳಿಂದ ಮುಂಬೈನಲ್ಲಿ ಇದ್ದೀನಿ ಖಂಡಿತ ಬರುತ್ತೇನೆ. ನಾವು ಬಂದಂತಹ ಸಂದರ್ಭದಲ್ಲಿ ಜಾತಿ, ಹಣದ ಬಗ್ಗೆ ಎತ್ತಿಕಟ್ಟಿ ನಮ್ಮ ಮಾನಹರಣ ಮಾಡುತ್ತಾರೆ. ಹೊರಗಡೆ ಇದ್ದರೂ ಮಾಡುತ್ತಾರೆ ಎಂದು ಗೊತ್ತಿದೆ. ಆದರೆ ಗೈರಾದ ಶಾಸಕನ ಬಗ್ಗೆ ಸದನದೊಳಗೆ ಮಾತನಾಡುವ ಅಧಿಕಾರ ಯಾವ ಸದಸ್ಯನಿಗೂ ಇಲ್ಲ. ಅದಕ್ಕೆ ಸ್ಪೀಕರ್ ಅವಕಾಶ ಮಾಡಿಕೊಡಬಾರದು ಎಂದು ಗರಂ ಆದರು. ಇದನ್ನೂ ಓದಿ: ಬಿಜೆಪಿಯಿಂದ ವಿಶ್ವನಾಥ್ಗೆ 28 ಕೋಟಿ ರೂ. ಆಫರ್: ಸಾ.ರಾ.ಮಹೇಶ್
ಇದೆಲ್ಲ ಗೊತ್ತಿದ್ದರೂ ಸಾ.ರಾ.ಮಹೇಶ್ ಸದನದಲ್ಲಿ ಆರೋಪ ಮಾಡಿದ್ದಾರೆ. ಅವರಿಗೆ ಧೈರ್ಯವಿದ್ದರೆ ಹೊರಗಡೆ ಬಂದು ಪ್ರತಿಕಾಗೋಷ್ಠಿ ಮಾಡಿ ಆರೋಪ ಮಾಡಲಿ. ಆಗ ನಾನು ಅದನ್ನು ಎದುರಿಸುತ್ತೇನೆ. ಅದನ್ನು ಬಿಟ್ಟು ಸದನದಲ್ಲಿ ಆಪಾದನೆ ಮಾಡಿದರೆ ಗಾಳಿಯಲ್ಲಿ ಗುಂಡು ಹೊಡೆದ ರೀತಿಯಲ್ಲಿ ಇರುತ್ತದೆ. ಸದನದಲ್ಲಿ ಯಾರು ಬೇಕಾದರು ಯಾರ ಮೇಲಾದರೂ ಆರೋಪ ಮಾಡಬಹುದು ಎಂದು ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಸದನದಲ್ಲಿ ಸದಸ್ಯನ ಗೈರು ಹಾಜರಿಯಲ್ಲಿ ಆಪಾದನೆ ಮಾಡುವ ಅವಕಾಶವಿಲ್ಲ. ಆದರೆ ಆಪಾದನೆ ಮಾಡುವುದಕ್ಕೆ ಸದನದಲ್ಲಿ ಪ್ರೋತ್ಸಾಹ ಕೊಟ್ಟಿದ್ದಾರೆ. ನಾನು ಇದನ್ನು ಸದನದಲ್ಲಿ ನೋಡಿದೆ. ಇದು ದ್ರೌಪದಿಯ ಸೀರೆ ಎಳೆಯುವಾಗ ಮಿಕ್ಕವರು ಅದನ್ನು ನೋಡಿ ನಕ್ಕಿದ್ದಂತಾಗಿದೆ. ಇದನ್ನು ನೋಡಿ ಮನಸ್ಸಿಗೆ ತುಂಬ ನೋವಾಯಿತು. ಸ್ಪೀಕರ್ ಪಕ್ಷಪಾತ ಮಾಡಿದ್ದಾರೆ. ಅದನ್ನು ಹೇಗೆ ಎಸದುರಿಸಬೇಕು ಎಂದು ಗೊತ್ತಿದೆ. ಈಗಾಗಲೇ ಸ್ಪೀಕರ್ಗೆ ಪತ್ರ ಬರೆಯುತ್ತಿದ್ದೇನೆ.
ಶುಕ್ರವಾರ ನಡೆದ ಚರ್ಚೆಯಲ್ಲಿ ಸಚಿವ ಸಾರಾ ಮಹೇಶ್ ವಿಶ್ವನಾಥ್ಗೆ ಬಿಜೆಪಿ ಅವರು 28 ಕೋಟಿ ರೂ. ಆಫರ್ ಕೊಟ್ಟಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದರು.