ಬೆಂಗಳೂರು: ಸಮ್ಮಿಶ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಜೆಡಿಎಸ್ ಹಿರಿಯ ನಾಯಕ, ಹುಣಸೂರಿನ ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ವಿರುದ್ಧ ನಡೆದ ಕ್ಷಿಪ್ರ ಬೆಳವಣಿಗೆಗೆ ಸರ್ಕಾರ ನಡೆಸುವವರೇ ಕಾರಣ ಎಂದು ವಿಶ್ವನಾಥ್ ನೇರವಾಗಿ ಹೇಳಿದರು.
ಯಾವುದೇ ಹಂತದಲ್ಲಿಯೂ ಕೂಡ ನಾವು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಆನಂದ್ ಸಿಂಗ್ ಸೇರಿದಂತೆ ಒಟ್ಟು 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದರು. ರಾಜೀನಾಮೆ ಸಲ್ಲಿಸಿದ ಬಳಿಕ ಈ ವಿಚಾರವನ್ನು ರಾಜ್ಯಪಾಲರ ಗಮನಕ್ಕೂ ಕೂಡ ತಂದಿದ್ದೇವೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರ ಜನರ ಆಶೋತ್ತರಗಳನ್ನು ಅರ್ಥೈಸಿಕೊಂಡು ಎರಡು ಪಕ್ಷದ ಶಾಸಕರನ್ನು ಒಂದಾಗಿ ಕರೆದುಕೊಂಡು ಹೋಗಲು ವಿಫಲವಾಗಿದೆ. ಸರ್ಕಾರ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಎಲ್ಲರ ಸಲಹೆ ತೆಗೆದುಕೊಂಡು ಹೋಗಲು ವಿಫಲವಾಗಿದೆ. ಪ್ರಮುಖವಾಗಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಸತ್ತು ಹೋಗಿದೆ. ಇದೂ ಸರ್ಕಾರ ನಡೆಗೆ ಬಹುಮುಖ್ಯ ಉದಾಹರಣೆಯಾಗಿದೆ. ಇಂತಹ ಹಲವು ಕಾರ್ಯಗಳು ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ. ಸರ್ಕಾರ ನಡೆಸುವವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಹೆಸರು ಪ್ರಸ್ತಾಪ ಮಾಡದೇ ಆರೋಪಿಸಿದರು.
ನಮ್ಮ ಇಚ್ಛೆಯ ಅನುಸಾರ ಶಾಸಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಅಲ್ಲದೇ ಈ ಮೂಲಕ ರಾಜ್ಯದ ಜನರಿಗೆ ತಿಳಿಸುತ್ತಿದ್ದೇವೆ. ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದು, ಸ್ಪೀಕರ್ ಅವರಿಗೂ ಪತ್ರ ಬರೆದು ರಾಜೀನಾಮೆ ಅಂಗೀಕಾರ ಮಾಡಿಕೊಳ್ಳಲು ಮನವಿ ಮಾಡಿದ್ದೇವೆ. ಅವರು ನಿಯಮಗಳ ಅನ್ವಯ ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.