– ಸಿಎಂ ಶ್ರೀಮಂತರ ಕಣ್ಣೀರು ಒರೆಸಿದ್ರೆ, ಹೆಚ್ಡಿಕೆ ಬಡವರಿಗಾಗಿ ಕಣ್ಣೀರು ಹಾಕ್ತಿದ್ರು
ಹಾಸನ: ಕರ್ನಾಟಕ ಹಣ ಇರುವವರ ಪಾಲಿಗೆ ಕಲ್ಯಾಣ ಕರ್ನಾಟಕ ಆಗುತ್ತಿದೆ. ಹಣ ಇಲ್ಲದವರ ಪಾಲಿಗೆ ಅನಾಥ ಕರ್ನಾಟಕ ಆಗುತ್ತಿದೆ ಎಂದು ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಳು, ಲಿಕ್ಕರ್ ದಂಧೆ ನಡೆಯುತ್ತಿರುವ ಬಗ್ಗೆ ಆತಂಕ ಹೊರಹಾಕಿದರು. ಸರ್ಕಾರಿ ಕಟ್ಟಡ ಕಟ್ಟಲು ಬಡವರಿಗೆ ಮರಳು ಸಿಗುತ್ತಿಲ್ಲ. ಹಳ್ಳಿಗಳಲ್ಲಿ ಟೀ ಬದಲು ಎಣ್ಣೆ ಸಿಗುತ್ತಿದೆ. ಪೊಲೀಸರೇ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಕರ್ನಾಟಕ ಹಣ ಇರುವವರ ಪಾಲಿಗೆ ಕಲ್ಯಾಣ ಕರ್ನಾಟಕ ಆಗುತ್ತಿದೆ. ಹಣ ಇಲ್ಲದವರ ಪಾಲಿಗೆ ಅನಾಥ ಕರ್ನಾಟಕ ಆಗುತ್ತಿದೆ ಎಂದು ಆರೋಪ ಮಾಡಿದರು.
ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿದ್ದಾರೆ. ಅವರನ್ನು ಮಟ್ಟ ಹಾಕುತ್ತೇನೆ ಎಂದು ಮುಖ್ಯಮಂತ್ರಿಗಳೇ ಹೇಳುತ್ತಿರುವಾಗ ನಾನೇಕೆ ಸಣ್ಣಪುಟ್ಟವರ ಬಗ್ಗೆ ಮಾತನಾಡಲಿ ಎಂದು ಹೇಳಿ ಆನಂದ್ ಸಿಂಗ್ಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಯಡಿಯೂರಪ್ಪ ಕಣ್ಣೀರು ಒರೆಸುವ ಮುಖ್ಯಮಂತ್ರಿ, ಕುಮಾರಸ್ವಾಮಿ ಕಣ್ಣೀರು ಹಾಕುವ ಮುಖ್ಯಮಂತ್ರಿ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಹೇಳಿರುವುದು ಸತ್ಯ. ಯಡಿಯೂರಪ್ಪ ಶ್ರೀಮಂತರ ಕಣ್ಣೀರು ಒರೆಸಿದರೆ, ಕುಮಾರಸ್ವಾಮಿ ಬಡವರಿಗಾಗಿ ಕಣ್ಣೀರು ಹಾಕುತ್ತಿದ್ದರು ಎಂದು ಟಾಂಗ್ ನೀಡಿದರು.